ದ.ಕ.: ಆನ್‌ಲೈನ್‌ನಲ್ಲಿ ಪ್ರಥಮ ಪಿಯುಸಿ ಫಲಿತಾಂಶ

Update: 2018-02-08 05:35 GMT

ಮಂಗಳೂರು, ಫೆ.8: ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘವು ಪ್ರಥಮ ಪಿಯುಸಿ ಫಲಿತಾಂಶಗಳ ಪ್ರಕಟನೆಗೆ ಏಕರೂಪದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ನಗರದ ಸರೋಜಿನಿ ಮಧುಸೂದನ ಕುಶೆ ಶಿಕ್ಷಣ ಸಂಸ್ಥೆಗಳ ಕಟ್ಟಡದಲ್ಲಿ  ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಯಿತು.

ರಾಜ್ಯದಲ್ಲಿಯೇ ಇದು ವಿನೂತನ ಪ್ರಯೋಗವಾಗಿದ್ದು, ಪ್ರಥಮ ಪಿಯುಸಿ ಫಲಿತಾಂಶ ಏಕರೂಪದಲ್ಲಿ, ಏಕಕಾಲದಲ್ಲಿ ‘ಸುವಿದ್ಯಾ’ ಪೋರ್ಟಲ್ ಮೂಲಕ ಆನ್‌ಲೈನ್‌ ನಲ್ಲಿ ಈ ಸಾಲಿನಿಂದ ಲಭ್ಯವಾಗಲಿದೆ. 

ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ಈ ಆನ್‌ಲೈನ್ ಫಲಿತಾಂಶ ವ್ಯವಸ್ಥೆಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ (www.dkpucpa.com) ಫಲಿತಾಂಶಕ್ಕಾಗಿ ಲಿಂಕ್ ಒದಗಿಸಲಿದ್ದು, ಅಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ತಮ್ಮ ಫಲಿತಾಂಶವನ್ನು ತಿಳಿಯಬಹುದಾಗಿದೆ. 

ಪ್ರಥಮ ಪಿಯುಸಿ ಫಲಿತಾಂಶದಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ತರುವ ದೃಷ್ಟಿಯಲ್ಲಿ ಕೇಂದ್ರೀಕೃತ ನಿಯಂತ್ರಣದೊಂದಿಗೆ ಸ್ವಯಂ ಚಾಲಿತವಾಗಿ ಫಲಿತಾಂಶ ಪಟ್ಟಿ ಹಾಗೂ ಸಂಬಂಧಪಟ್ಟ ಅಂಕಿಅಂಶಗಳು ಮತ್ತು ಅಗತ್ಯ ಅನುಬಂಧಗಳನ್ನು ತಯಾರಿಸುವ ಮತ್ತು ಮುದ್ರಿಸುವ ಸೌಲಭ್ಯ ಈ ವ್ಯವಸ್ಥೆ ಒದಗಿಸಲಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 198 ಪದವಿ ಪೂರ್ವ ಕಾಲೇಜುಗಳಿದ್ದು, ಅವುಗಳಲ್ಲಿ 53 ಸರಕಾರಿ ಹಾಗೂ 42 ಅನುದಾನಿತ ಕಾಲೇಜುಗಳಾಗಿವೆ.

ತಂತ್ರಜ್ಞಾನದ ಪ್ರಯೋಜನಗಳು 

ವಿದ್ಯಾರ್ಥಿಗಳ ಮಾಹಿತಿಯನ್ನು ಸಮಗ್ರವಾಗಿ ಕ್ರೋಡೀಕರಿಸಿ ಗೌಪ್ಯತೆಯನ್ನು ಕಾಪಾಡುವುದು, ಉಪನಿರ್ದೇಶಕರ ಮೇಲ್ವಿಚಾರಣೆಗೆ ಒಳಪಟ್ಟು ಕೇಂದ್ರೀಕೃತ ಸಂಪೂರ್ಣ ನಿಯಂತ್ರಣ ವ್ಯವಸ್ಥೆ, ವಿದ್ಯಾರ್ಥಿಗಳ ಅಂಕಗಳು ಸುಲಭ ಹಾಗೂ ಶೀಘ್ರದಲ್ಲಿ ಅಳವಡಿಸಲು ಅವಕಾಶ, ನೋಡಲ್ ಕೇಂದ್ರ ಮತ್ತು ಉಪ ನಿರ್ದೇಶಕರಿಂದ ಸುಲಭ ಹಾಗೂ ಶೀಘ್ರ ಅನುಮೋದನೆಗೆ ಅವಕಾಶ, ವಿಭಾಗವಾರು, ಸಂಯೋಜನೆವಾರು, ಭಾಷಾವಾರು, ಲಿಂಗಾವಾರು, ವರ್ಗವಾರು, ಅಂಕಿಅಂಶಗಳನ್ನು ಪಡೆಯಲು ಹಾಗೂ ಮುದ್ರಿಸಲು ಅವಕಾಶ, ಎ3 ಸೈಝ್‌ನಲ್ಲಿ ಮುದ್ರಣ ಮಾಡಲು ಅವಕಾಶವಿರದ ಕಾಲೇಜಿನವರು ಯಾವುದೇ ಸೈಬರ್ ಸೆಂಟರ್‌ಗಳು ಅಥವಾ ಜೆರಾಕ್ಸ್ ಸೆಂಟರ್‌ಗಳಿಗೆ ಹೋಗದೆ ಉಪನಿರ್ದೀಶಕರ ಕಚೇರಿಯಲ್ಲಿ ಅನುಮೋದಿಸಿದ ಫಲಿತಾಂಶ ಪಟ್ಟಿಯನ್ನು ಪಡೆಯಲು ಅವಕಾಶ, ಸ್ವಯಂಚಾಲಿತ ಪ್ರವೇಶ ಪತ್ರ, ಅಂಕಪಟ್ಟಿ ಮತ್ತು ಫಲಿತಾಂಶ ಅನುಮೋದನೆಗೆ ಬೇಕಾದ ಎಲ್ಲಾ ಅನುಬಂಧಗಳು ಫಲಿತಾಂಶ ಪಟ್ಟಿ ಮುದ್ರಿಸಲು ಅವಕಾಶ, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ತಿಳಿದು ತಾತ್ಕಾಲಿಕ ಅಂಕಪಟ್ಟಿ ಪಡೆಯಲು ಅವಕಾಶವನ್ನು ಈ ನೂತನ ತಂತ್ರಜ್ಞಾನ ಒದಗಿಸಲಿದೆ.

ಪ್ರಥಮ ಪಿಯುಸಿಯ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ ಈ ನೂತನ ತಂತ್ರಜ್ಞಾನ ಕರ್ನಾಟಕದಲ್ಲಿಯೇ ಪ್ರಥಮವಾಗಿದ್ದು, ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳಡಿಸಲು ಸೂಚನೆ ನೀಡಲಾಗುವುದು.

-ಸಿ. ಶಿಖಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News