ಕುಂತೂರು: ನದಿಗಿಳಿದು ನೀರುಪಾಲಾಗುತ್ತಿದ್ದ 8 ಮಂದಿ ಬಾಲಕರ ರಕ್ಷಣೆ

Update: 2018-02-13 13:37 GMT

ಕಡಬ, ಫೆ.13: ಸ್ನಾನಕ್ಕೆಂದು ನದಿಗೆ ಇಳಿದು ಈಜಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಎಂಟು ಮಂದಿ ಬಾಲಕರನ್ನು ಸ್ಥಳೀಯರು ರಕ್ಷಿಸಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಂಗಳವಾರ ಕುಂತೂರಿನಲ್ಲಿ ನಡೆದಿದೆ. 

ಹತ್ತನೇ ತರಗತಿಯ ಎಂಟು ಮಂದಿ ಬಾಲಕರು ಸ್ನಾನ ಮಾಡುವ ಸಲುವಾಗಿ ಪದವು ಸಮೀಪದ ಉರುಂಬಿ ಎಂಬಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಗೆ‌ ಇಳಿದಿದ್ದರು. ನದಿ ನೀರಿನಲ್ಲಿ ಆಟವಾಡುತ್ತಾ ಮುಂದೆ ಸಾಗಿದ ಬಾಲಕರು ನದಿಯ ಮಧ್ಯ ಭಾಗಕ್ಕೆ ತಲುಪಿದಾಗ ಸುಸ್ತಾಗಿದ್ದರು. 

ನದಿಯಲ್ಲಿ ಈಜಲಾಗದೆ ಒದ್ದಾಡುತಿದ್ದ ಬಾಲಕರನ್ನು ಇನ್ನೊಂದು ದಡದಲ್ಲಿದ್ದ ಸ್ಥಳೀಯರು ಗಮನಿಸಿದ್ದು, ಅವರು ಇತರರಿಗೆ ಮಾಹಿತಿ ನೀಡಿದ್ದು, ಅದರಂತೆ  ಸ್ಥಳಕ್ಕಾಗಮಿಸಿದ ಸಿದ್ದೀಕ್ ಎ.ಎಸ್, ಸತೀಶ್ ಪೂಜಾರಿ, ಅಯ್ಯೂಬ್ ಬಿ.ಕೆ., ಇಕ್ಬಾಲ್ ಎ.ಎಸ್, ವಿಠಲ ನಾಯ್ಕ್, ಉನೈಸ್ ಹಾಗೂ ಇಕ್ಬಾಲ್ ಎಂಬವರು ನೀರಿನಲ್ಲಿ ಒದ್ದಾಡುತಿದ್ದ ಬಾಲಕರನ್ನು ರಕ್ಷಿಸಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News