ನನ್ನನ್ನು ಎಷ್ಟು ದಿನದಲ್ಲಿ ಬಿಡುಗಡೆ ಮಾಡುತ್ತೀರಿ?: ತಿಹಾರ್ ಜೈಲು ಕಚೇರಿಗೆ ಆರ್ ಟಿಐ ಪ್ರಶ್ನೆ ಕೇಳಿದ ಕೈದಿ
ಹೊಸದಿಲ್ಲಿ, ಫೆ.17: ಆರ್ ಟಿಐ ಮೂಲಕ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ತಿಹಾರ್ ಜೈಲಿನಲ್ಲಿರುವ ಕೈದಿಗಳೂ ಕೂಡ ಆರ್ ಟಿಐನಡಿ ಪ್ರಶ್ನೆ ಕೇಳಿದ್ದಾರೆ. ಅದೂ ಕೂಡ ಒಂದನ್ನೊಂದು ಮೀರಿಸುವಂತಹದ್ದು.
ಹಿರಿಯ ಅಧಿಕಾರಿಗಳಿರುವ ಜೈಲು ಮುಖ್ಯ ಕಚೇರಿಗೆ ಪ್ರತಿದಿನ ಇಂತಹ 2 ಪ್ರಶ್ನೆಗಳು ಬರುತ್ತವೆ. ಡಿಸೆಂಬರ್ ತಿಂಗಳಿನಲ್ಲಿ ಇಂತಹ 70 ಪ್ರಶ್ನೆಗಳನ್ನು ಕೇಳಲಾಗಿದ್ದರೆ, ಜನವರಿಯಲ್ಲಿ ಇದರ ಸಂಖ್ಯೆ 59.
ಹೆಚ್ಚಿನ ಕೈದಿಗಳು ಜೈಲಿನ ಸಮಯ, ಸಿಗದ ಸೌಲಭ್ಯಗಳ ಬಗ್ಗೆ ಆರ್ ಟಿಐ ಅರ್ಜಿ ಸಲ್ಲಿಸುತ್ತಾರೆ. ತಿಹಾರ್ ಜೈಲಿನಲ್ಲಿ ಸುಮಾರು 14,500 ಮಂದಿಯಿದ್ದಾರೆ.
ಸಾಮಾನ್ಯವಾಗಿ ಕೈದಿಗಳು ಕೇಳುವ ಪ್ರಶ್ನೆಗಳು ಈ ಕೆಳಗಿನಂತಿವೆ.
“ನನ್ನನ್ನು ಎಷ್ಟು ದಿನದಲ್ಲಿ ಬಿಡುಗಡೆ ಮಾಡುತ್ತೀರಿ?”, “ಪ್ರತಿದಿನ ಬೆಳಗ್ಗೆ ನಮಗೆ 2 ಲೋಟ ಹಾಲು ಸಿಗಬಹುದೇ?”, “ಈ ಬಾರಿ ನಮಗೆ ನಿಂಬೆಹಣ್ಣು ಏಕೆ ಸಿಗಲಿಲ್ಲ”, “ಸೊಳ್ಳೆಬತ್ತಿಯನ್ನು ನಮಗೆ ಯಾಕೆ ನೀಡಿಲ್ಲ?”….
ಆರ್ ಟಿಐ ಅರ್ಜಿ ಸಲ್ಲಿಸಲು ಜೈಲಿನೊಳಗಿನಿಂದಲೇ ಕೈದಿಗಳಿಗೆ ನೆರವು ಸಿಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ. ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಸುಶೀಲ್ ಶರ್ಮಾ ಆರ್ ಟಿಐ ಮೂಲಕ ಕೈದಿಗಳು ಕಾನೂನು ಹಕ್ಕುಗಳನ್ನು ಪಡೆಯಲು ನೆರವಾಗುತ್ತಾರೆ ಎನ್ನುತ್ತಾರೆ ಅವರು. “ಶರ್ಮಾರಂತಹ ಕೈದಿಗಳು ಕಾನೂನು ಹಾಗು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಪರಿಣತರಾಗಿದ್ದಾರೆ. ಕೈದಿಗಳಿಗೆ ಅವರು ವಕೀಲರಂತಾಗಿದ್ದಾರೆ. ಆರ್ ಟಿಐ ಮೂಲಕ ಮಾಹಿತಿಗಳನ್ನು ಪಡೆಯಲೂ ಇವರು ಕೈದಿಗಳಿಗೆ ನೆರವಾಗುತ್ತಾರೆ ಎಂದವರು ಹೇಳುತ್ತಾರೆ.