ಉಡುಪಿ: ಮಠಾಧೀಶರೊಂದಿಗೆ ಅಮಿತ್ ಶಾ ಸಮಾಲೋಚನೆ ಸಭೆ
ಉಡುಪಿ, ಫೆ. 20: ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವಿಭಜಿತ ದ.ಕ. ಜಿಲ್ಲೆಗಳ ವಿವಿಧ ಮಠಾಧೀಶರೊಂದಿಗೆ ಸಮಾಲೋಚನಾ ಸಭೆಯನ್ನು ಮಂಗಳವಾರ ರಾತ್ರಿ ಉಡುಪಿಯ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಂಗಣದಲ್ಲಿ ನಡೆಸಿದರು.
ಅಧ್ಯಕ್ಷತೆಯನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ವಹಿಸಿದ್ದರು. ಅಲ್ಪ ಸಂಖ್ಯಾತ ಬಹುಸಂಖ್ಯಾತ ಎಂಬ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು ಸೇರಿದಂತೆ ರಾಜ್ಯದ ವಿವಿಧ ಸಮಸ್ಯೆಗಳ ಕುರಿತು ಸಭೆ ಯಲ್ಲಿ ಚರ್ಚಿಸಲಾಯಿತು.
ವಿವಿಧ ಮಠಾಧೀಶರು ಸಭೆಯಲ್ಲಿ ಮಾತನಾಡಿದರು. ಅಮಿತ್ ಶಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ, ಹೊಸನಗರ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ, ವಜ್ರದೇಹಿ ಮಠದ ರಾಜಶೇಖರಾನಂದ, ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ, ಬಾಳೆಕುದ್ರು ನರಸಿಂಹಾಶ್ರಮ, ಕೇಮಾರು ಈಶ ವಿಠಲದಾಸ ಸ್ವಾಮೀಜಿ ಮೊದಲಾದವರು ಹಾಜರಿದ್ದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಶಾಸಕರಾದ ಸಿ.ಟಿ.ರವಿ, ಸುನಿಲ್ ಕುಮಾರ್, ಮುಖಂಡರಾದ ಸಂತೋಷ್, ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ, ರಘಪತಿ ಭಟ್, ಲಾಲಾಜಿ ಆರ್. ಮೆಂಡನ್, ದಿನಕರ ಬಾಬು ಮೊದಲಾದವರು ಉಪಸ್ಥಿತರಿದ್ದರು.
ಸ್ವಾಮೀಜಿಗಳು ಹಾಗೂ ಮುಖಂಡರು ಹೊರತು ಪಡಿಸಿದರೆ ಉಳಿದವರಿಗೆ ಸಭೆಯಲ್ಲಿ ಅವಕಾಶ ಇರಲಿಲ್ಲ. ಮಾಧ್ಯಮದರಿಗೂ ಅವಕಾಶ ನಿರಾಕರಿಸ ಲಾಗಿತ್ತು.
ರಾಹುಲ್ ಗಾಂಧಿ ಬಂದರೂ ಕರೆಯುತ್ತೇವೆ: ಪೇಜಾವರ ಶ್ರೀಎಲ್ಲ ಧರ್ಮವನ್ನು ಸಮಾನತೆಯಿಂದ ನೋಡಿ, ಪಕ್ಷಪಾತ ಮಾಡಬೇಡಿ. ಬೇರೆ ಧರ್ಮದವರಿಗೆ ನೀಡುವ ಸವಲತ್ತುಗಳನ್ನು ಹಿಂದೂಗಳಿಗೂ ನೀಡಿ ಎಂದು ಸಭೆಯಲ್ಲಿ ಅಮಿತ್ ಶಾ ಅವರಿಗೆ ಹೇಳಿದ್ದೇವೆ ಎಂದು ಪೇಜಾವರ ಶ್ರೀ ತಿಳಿಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಧರ್ಮವನ್ನು ಒಂದೇ ರೀತಿಯಲ್ಲಿ ನೋಡಬೇಕು. ಶಾದಿ ಭಾಗ್ಯ, ಮಠಗಳ ನಿಯಂತ್ರಣ ಎಲ್ಲರಿಗೂ ಒಂದೇ ರೀತಿ ಇರಬೇಕು. ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರು ಎಂಬುದಾಗಿ ತಾರತಮ್ಯ ಮಾಡಬಾರದು. ಮಹಾದಾಯಿ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಲು ಪ್ರಯತ್ನ ಮಾಡಬೇಕೆಂದು ತಿಳಿಸಲಾಯಿತು ಎಂದರು.
ನಮ್ಮ ಅಭಿಪ್ರಾಯ ಹೇಳಿದ್ದೇವೆ. ಇನ್ನು ಅವರು ಏನು ಮಾಡುತ್ತಾರೆ ಎಂದು ನೋಡಬೇಕು. ಅಮಿತ್ ಶಾ ಮಠಾಧೀಶರ ಸಭೆ ಕರೆದ ಹಿನ್ನೆಲೆಯಲ್ಲಿ ನಾವು ಸೇರಿದ್ದೇವೆ. ನಾಳೆ ರಾಹುಲ್ ಗಾಂಧಿ ಬಂದರೂ ಅವರನ್ನು ಕರೆದು ಇದನ್ನೇ ಹೇಳುತ್ತೇವೆ. ಯಾವುದೇ ಪಕ್ಷದವರು ಬಂದರೂ ನಮ್ಮ ಅಭಿಪ್ರಾಯ ತಿಳಿಸು ತ್ತೇವೆ. ಮಾಡುವುದು ಬಿಡುವುದು ಅವರಿಗೆ ಬಿಟ್ಟದ್ದು. ನಾವು ಎಲ್ಲ ಪಕ್ಷದವರ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತೇವೆ. ರಾಮ ಮಂದಿರ ಹಾಗೂ ಗೋಹತ್ಯೆ ನಿಷೇಧದ ಕುರಿತು ಚರ್ಚೆ ಮಾಡಿಲ್ಲ ಎಂದು ಅವರು ಹೇಳಿದರು.