ಮಾಲಕನನ್ನೇ ಕೊಲೆಗೈದು ಮೃತದೇಹವನ್ನು ಶಿರಾಡಿಯಲ್ಲಿ ಎಸೆದ ಕೆಲಸದವರು

Update: 2018-02-23 07:07 GMT

ಉಪ್ಪಿನಂಗಡಿ, ಫೆ. 23: ವ್ಯಕ್ತಿಯೋರ್ವನನ್ನು ಕೊಲೆ ಮಾಡಿ, ಶಿರಾಡಿ ಬಳಿ ಎಸೆದು ಹೋದ ಘಟನೆ ನಡೆದಿದ್ದು, ಮೃತದೇಹವನ್ನು ಉಪ್ಪಿನಂಗಡಿ ಪೊಲೀಸರು ಶುಕ್ರವಾರ ಪತ್ತೆ ಹಚ್ಚಿದ್ದಾರೆ. 

ಸೋಮವಾರ ಪೇಟೆ ಮೂಲದ ಮಹೇಶ್ ಹತ್ಯೆಗೆ ಒಳಗಾದವರು ಎಂದು ಗುರುತಿಸಲಾಗಿದ್ದು, ಅವರ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಫರ್ನಿಚರ್ ಅಂಗಡಿ ಹೊಂದಿದ್ದ ಅವರನ್ನು ಅವರ ಕೆಲಸದವರಾದ ರಘು ಹಾಗೂ ಕಿರಣ ಎಂಬವರು ಸೇರಿ ಮಾಣಿ ಸಮೀಪದ ಬುಡೋಳಿ ಬಳಿ ಕೊರಳು ಬಿಗಿದು ಕೊಲೆಗೈದಿದ್ದು, ಬಳಿಕ ಶಿರಾಡಿಯ ಒಂದು ಕಿ.ಮೀ. ಮುಂದಕ್ಕೆ ಕೆಂಪು ಹೊಳೆಯ ಬದಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದರು.

ಆರೋಪಿಗಳು ಸೋಮವಾರ ಪೇಟೆ ಪೊಲೀಸರಿಗೆ ಶರಣಾಗಿ, ಕೊಲೆ ನಡೆಸಿದ ಬಗ್ಗೆ ತಿಳಿಸಿದ್ದರು. ಮಾಹಿತಿ ಅರಿತ ಉಪ್ಪಿನಂಗಡಿ ಪೊಲೀಸರು ಮೃತದೇಹಕ್ಕಾಗಿ ನಿನ್ನೆ ರಾತ್ರಿ ಹುಡುಕಾಡಿದರಾದರೂ ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಬಂದು ವಿಚಾರಿಸಿದಾಗ, ಅವರು ಮೃತದೇಹ ಎಸೆದ ಸ್ಥಳವನ್ನು ತೋರಿಸಿದರು. ಹಣದ ವೈಷಮ್ಯಕ್ಕಾಗಿ ಈ ಕೊಲೆ ನಡೆಸಲಾಗಿದೆ ಎಂದು ಮೊದಲು ಆರೋಪಿಗಳು ತಿಳಿಸಿದ್ದರಾದರೂ, ಅನೈತಿಕ ವ್ಯವಹಾರ ಶಂಕೆಯೂ ಈ ಪ್ರಕರಣದಲ್ಲಿ ಕೇಳಿ ಬರುತ್ತಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News