ಪಿಲಿಕುಳ: ದೇಶದ ಪ್ರಥಮ 3ಡಿ ಹೈಬ್ರಿಡ್ ತಾರಾಲಯ ಲೋಕಾರ್ಪಣೆ

Update: 2018-03-01 10:34 GMT

ಮಂಗಳೂರು, ಮಾ.1: ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಭಾರತದ ಪ್ರಥಮ ‘ಸ್ವಾಮಿ ವಿವೇಕಾನಂದ’ ತ್ರಿಡಿ 8ಕೆ ಹೈಬ್ರಿಡ್ ತಾರಾಲಯವನ್ನು ಇಂದು ರಾಜ್ಯದ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಲೋಕಾರ್ಪಣೆಗೊಳಿಸಿದರು.

ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ‘ಸ್ವಾಮಿ ವಿವೇಕಾನಂದ ತಾರಾಲಯ’ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮೇಯರ್ ಕವಿತಾ ಸನಿಲ್ ಹಾಗೂ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಗಣ್ಯರೊಂದಿಗೆ ‘ನಾವು ನಕ್ಷತ್ರಗಳು’ ಎಂಬ ತ್ರಿಡಿ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಪಿಲಿಕುಳದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗುತ್ತಿದ್ದು, ರಾಜ್ಯಪಾಲರ ಅಂಕಿತವಾದ ಕ್ಷಣ ಪ್ರಾಧಿಕಾರ ಕಾರ್ಯಾರಂಭಿಸಲಿದೆ ಎಂದು ಹೇಳಿದರು. ಪ್ರಾಧಿಕಾರದ ಮೂಲಕ ಪಿಲಿಕುಳವು ಸಮಗ್ರ ಅಭಿವೃದ್ಧಿಯೊಂದಿಗೆ ಆಕರ್ಷಕ ಪ್ರವಾಸಿ ತಾಣವಾಗಿ ಇನ್ನಷ್ಟು ಹೆಚ್ಚಿನ ಬೆಳವಣಿಗೆಯನ್ನು ಕಾಣಲಿದೆ. ಮುಂದಿನ ಎರಡು ತಿಂಗಳೊಳಗೆ ಪಿಲಿಕುಳದೊಳಗೆ ಪ್ರವಾಸಿಗರಿಗೆ ಸಂಚರಿಸಲು ಇಲೆಕ್ಟ್ರಿಕಲ್ ವಾಹನದ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಈ ಹಿಂದಿನ ಸರಕಾರದಿಂದ 11 ಕೋಟಿ ರೂ.ಗಳ ಬಿಡುಗಡೆಯೊಂದಿಗೆ 2013ರವರೆಗೆ ಕಾಗದ ಪತ್ರದಲ್ಲಿದ್ದ 3ಡಿ ತಾರಾಲಯದ ರೂಪುರೇಷೆ ಹಾಗೂ ಅಂದಾಜುವೆಚ್ಚ 2014ರಲ್ಲಿ 24 ಕೋಟಿ ರೂ.ಗಳಿಗೇರಿತ್ತು. ಅದನ್ನು ಸರಕಾರದಿಂದ ಮಂಜೂರು ಮಾಡಿಸಿ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದ್ದು, ಇದೀಗ 35.69 ಕೋಟಿ ರೂ. ನಿರ್ಮಾಣವಾಗಿದೆ. ತಾರಾಲಯದ ನಿರ್ಮಾಣದ ಅಂದಾಜು ವೆಚ್ಚದಲ್ಲಿನ ಸುಮಾರು 11 ಕೋಟಿ ರೂ.ಗಳ ವ್ಯತ್ಯಾಸದ ಹಣವನ್ನು ಏಕಗಂಟಿನಲ್ಲಿ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ನೀಡಿದ್ದರಿಂದ ಈ ಯೋಜನೆ ಸಾಕಾರಗೊಂಡಿದೆ ಎಂದು ಅವರು ತಿಳಿಸಿದರು.

ಶಾಸಕ ಜೆ.ಆರ್. ಲೋಬೋ ಮಾತನಾಡಿ, 1993ರಲ್ಲಿ ಬೋಳುಗುಡ್ಡೆಯಾಗಿದ್ದ ಈ ಪ್ರದೇಶ ಅಂದಿನ ಜಿಲ್ಲಾಧಿಕಾರಿ ಡಾ.ಭರತ್ ಲಾಲಾ ಮೀನಾ ಅವರ ಮಾರ್ಗದರ್ಶನದಲ್ಲಿ ಇಂದು ತಾರಾಲಯದ ಆಕರ್ಷಣೆಯೊಂದಿಗೆ ಜಾಗತಿಕವಾಗಿ ಗುರುತಿಸಿಕೊಳ್ಳುವ ನಿಸರ್ಗಧಾಮವಾಗಿ ಬೆಳೆಯುವಲ್ಲಿ ಸಾಗಿ ಬಂದ ಹಾದಿಯನ್ನು ನೆನಪಿಸಿಕೊಂಡರು.

ಈ ಸಂದರ್ಭ ತಾರಾಲಯದ ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಭಯಚಂದ್ರ ಜೈನ್ ವಹಿಸಿದ್ದರು.

ಶಾಸಕ ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್, ಇಸ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗುರುಪ್ರಸಾದ್, ಪ್ರಾದೇಶಿಕ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಎಚ್. ಹೊನ್ನೇಗೌಡ, ಡಾ. ಕೆ.ವಿ.ರಾವ್, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ. ಪ್ರಸನ್ನ, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಅಧಿಕಾರಿಗಳಾದ ಪ್ರಭಾಕರ ಶರ್ಮಾ, ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.


►ಎರಡು ದಿನ ಉಚಿತ ಪ್ರದರ್ಶನ

ತಾರಾಲಯದ ಉದ್ಘಾಟನಾ ಸಮಾರಂಭದ ಅಂಗವಾಗಿ ಇಂದು ಮತ್ತು ನಾಳೆ ತಾರಾಲಯದಲ್ಲಿ ಮುಂಗಡ ಟಿಕೆಟ್ ಮೂಲಕ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿದೆ.


►ಕಣ್ಣಳತೆಯಲ್ಲೇ ಬಾಹ್ಯಕಾಶದ ದಿವ್ಯ ದರ್ಶನ
 170 ಆಸನಗಳಿರುವ ತ್ರಿಡಿ ತಾರಾಲಯದಲ್ಲಿ ಬಾಹ್ಯಾಕಾಶದ ಕೌತುಕಳನ್ನು ಪ್ರದರ್ಶನಗಳ ಮೂಲಕ ವೀಕ್ಷಿಸಬಹುದಾಗಿದೆ. 3ಡಿ 8 ಕೆ ಹೈಬ್ರಿಡ್ ತಂತ್ರಜ್ಞಾನದಿಂದ ಕೂಡಿದ ಈ ತಾರಾಲಯವು 18 ಮೀಟರ್‌ನ ನ್ಯಾನೋ ಸಿಮ್ ಡೋಮನ್ನು 15 ಡಿಗ್ರಿ ಕೋನದಲ್ಲಿ ಅಳವಡಿಸಲಾಗಿದೆ. ಪ್ರೇಕ್ಷಕರು ಥಿಯೇಟರ್‌ನಲ್ಲಿ ಚಿತ್ರಗಳನ್ನು ವೀಕ್ಷಿಸುವಂತೆ ಪ್ರದರ್ಶನವನ್ನು ಆನಂದಿಸಬಹುದಾಗಿದೆ. ದೇಶದ ಪ್ರಥಮ ಆ್ಯಕ್ಟಿವ್ ಅಪ್ಟೋಮೆಕ್ಯಾನಿಕಲ್ ಪ್ರೊಜೆಕ್ಷನ್ ಸಿಸ್ಟಮ್ ಒಳಗೊಂಡ ತಾರಾಲಯ ಇದಾಗಿದ್ದು, ಜಗತ್ತಿನ 21 ತ್ರಿಡಿ ತಾರಾಲಯಗಳ ಸಾಲಿಗೆ ಸೇರ್ಪಡೆಗೊಂಡಿದೆ.


ಇದೇ ವೇಳೆ ತಾರಾಲಯ ಹೊರಭಾಗದಲ್ಲಿ ಖಗೋಳ ವ್ಯೋಮಯಾನದ ಕುರಿತಂತೆ ಇಸ್ರೋದಿಂದ ಉಡಾಯಿಸಲಾಗಿರುವ ವಿವಿಧ ಉಪಗ್ರಹಣಗಳ ಮಾದರಿಗಳ ಪ್ರದರ್ಶನಕ್ಕೆ ಸಚಿವರು ಚಾಲನೆ ನೀಡಿದರು. ಈ ಸಂದರ್ಭ ಪಿಲಿಕುಳದಲ್ಲಿ ಪ್ರವಾಸಿಗರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವ ವಾಹನಗಳಿಗೂ ಸಚಿವರು ಚಾಲನೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News