ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರಕಟ

Update: 2018-03-07 11:27 GMT

ಮಂಗಳೂರು, ಮಾ.7: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2016 ಮತ್ತು 2017ನೆ ಸಾಲಿನ ಗೌರವ ಪ್ರಶಸ್ತಿಗೆ ಆರು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2016ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತ್ಯ/ಸಂಶೋಧನೆ ವಿಭಾಗದಲ್ಲಿ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿ, ಜಾನಪದ ಕ್ಷೇತ್ರದಲ್ಲಿ ಮುಹಮ್ಮದ್ ಮಣ್ಣಗುಂಡಿ ಮತ್ತು ಬ್ಯಾರಿ ಕಲೆ ವಿಭಾಗದಲ್ಲಿ ಅಬೂಬಕರ್ ಬಡ್ಡೂರು ಹಾಗೂ 2017ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತ್ಯ/ಸಂಶೋಧನೆ ವಿಭಾಗದಲ್ಲಿ ಸಂಘಟಕ ಉಮರ್ ಯು.ಎಚ್., ಬ್ಯಾರಿ ಕಲೆ ವಿಭಾಗದಲ್ಲಿ ಅಝೀಝ್ ಬೈಕಂಪಾಡಿ ಮತ್ತು ಜಾನಪದ ವಿಭಾಗದಲ್ಲಿ ಬಿ.ಎಂ.ಹಸೈನಾರ್ ಕಡಂಬು ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ರೂ.ನಗದು, ಸ್ಮರಣಿಕೆ, ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಪ್ರದಾನ: ಈ ಎರಡು ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.13ರಂದು ಮೂಡಿಗೆರೆಯ ಎಚ್.ಎಸ್.ಚಂದ್ರೇಗೌಡ ಬಡಾವಣೆಯ ರೈತ ಭವನದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10ಕ್ಕೆ ಬ್ಯಾರಿ ಗೀತೆಗಳು, ಮಧ್ಯಾಹ್ನ 12ಕ್ಕೆ ಬ್ಯಾರಿ ಕವಿಗೋಷ್ಠಿ ಹಾಗೂ ಅಪರಾಹ್ನ 2 ಗಂಟೆಗೆ ಪ್ರಶಸ್ತಿ ಪ್ರದಾನ ಜರಗಲಿದೆ. ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆಹಾರ ಸಚಿವ ಯು.ಟಿ.ಖಾದರ್ ಮತ್ತು ನಗರಾಭಿವೃದ್ಧಿ ಮತ್ತು ಹಜ್ ಸಚಿವ ಸಚಿವ ಆರ್.ರೋಶನ್ ಬೇಗ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕರಾದ ಮೋಟಮ್ಮ, ಬಿ.ಬಿ. ನಿಂಗಯ್ಯ, ಎಂ.ಕೆ.ಪ್ರಾಣೇಶ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯರಾದ ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ, ಮುಹಮ್ಮದ್ ಆರೀಫ್ ಪಡುಬಿದ್ರೆ, ತನ್ಸೀಫ್ ಕಿಲ್ಲೂರು, ಹಸನಬ್ಬ ಮೂಡುಬಿದಿರೆ, ಮುಹಮ್ಮದ್ ಅನ್ಸಾರ್ ಬೆಳ್ಳಾರೆ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು
►ಫಕೀರ್ ಮುಹಮ್ಮದ್ ಕಟ್ಪಾಡಿ: ಫಕೀರ್ ಮುಹಮ್ಮದ್ ಕಟ್ಪಾಡಿ ಉಡುಪಿ ಜಿಲ್ಲೆಯ ಬಾರ್ಕೂರಿನವರು. ಆರು ಕಥಾ ಸಂಕಲನಗಳು, ಎರಡು ಕಾದಂಬರಿಗಳು ಹಾಗೂ ಏಳು ಇತರ ಕೃತಿಗಳು, ಐದು ಅನುವಾದ ಕೃತಿಗಳು ಪ್ರಕಟವಾಗಿವೆ. ಬಂಡಾಯ ಸಾಹಿತ್ಯ ಸಂಘಟನೆ, ಸಮುದಾಯದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕರ್ನಾಟಕ ಸಾಹಿತ್ಯ ಅಕಾಡಮಿ, ಕೇಂದ್ರ ಸಾಹಿತ್ಯ ಅಕಾಡಮಿಯ ಕನ್ನಡ ವಿಭಾಗದ ಸದಸ್ಯರಾಗಿ ಕೆಲಸ ಮಾಡಿದ್ದು, ಸ್ಟೇಟ್ ಬ್ಯಾಂಕ್ ಆ್ ಇಂಡಿಯಾದ ಅಧಿಕಾರಿಗಳ ಸಂಘಟನೆಯ ಮಂಗಳೂರು ವಲಯ ಕಾರ್ಯದರ್ಶಿಯಾಗಿದ್ದರು.

►ಅಬೂಬಕ್ಕರ್ ಬಡ್ಡೂರು: ಮೇರಮಜಲು ಗ್ರಾಮದ ಬಡ್ಡೂರಿನ ಅಬೂಬಕ್ಕರ್ ಬಡ್ಡೂರು, ತನ್ನ 18ನೇ ವಯಸ್ಸಿನಲ್ಲಿ ನಾಟಕದಲ್ಲಿ ಅಭಿನಯಿಸಲು ತೊಡಗಿ 300ಕ್ಕಿಂತ ಹೆಚ್ಚು ನಾಟಕಗಳು, ಹಲವಾರು ಟೆಲಿಫಿಲಂಗಳು ಹಾಗೂ ನಾಲ್ಕು ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಬ್ಯಾರಿ, ತುಳು, ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆರು ನಾಟಕಗಳನ್ನು ಸ್ವತಃ ಬರೆದು ಅಭಿನಯಿಸಿ ನಿರ್ದೇಶಿಸಿದ್ದಾರೆ. 2014ರಲ್ಲಿ ಮುಡಿಪುವಿನಲ್ಲಿ ನಡೆದ ಅಬ್ಬಕ್ಕ ಉತ್ಸವದಲ್ಲಿ ತೆಲಿಕೆದ ಪಂಥದಲ್ಲಿ ಸ್ಪರ್ಧಿಸಿ ಪ್ರಥಮ ಬಹುಮಾನ ಗೆದ್ದಿದ್ದಾರೆ.

►ಮುಹಮ್ಮದ್ ಮಣ್ಣಗುಂಡಿ: ಅವಿಭಜಿತ ದ.ಕ. ಜಿಲ್ಲೆಯ ಕಂಬಳದ ಕೋಣಗಳ ಓಟಗಾರ. ತನ್ನ 18ನೇ ವಯಸ್ಸಿನಲ್ಲೇ ಕಂಬಳದ ಕೋಣಗಳ ಓಡಿಸುವ ಕಾಯಕಕ್ಕೆ ಇಳಿದಿದ್ದಾರೆ. ನೇಗಿಲು ಹಿರಿಯ, ಹಗ್ಗ ಹಿರಿಯ, ನೇಗಿಲು ಕಿರಿಯ, ಹಗ್ಗ ಹಿರಿಯ ಸೇರಿದಂತೆ ಎಲ್ಲ ಪ್ರಕಾರದಲ್ಲೂ ಕೋಣಗಳನ್ನು ಓಡಿಸಿ ದಾಖಲೆಯ ಪ್ರಶಸ್ತಿಗಳನ್ನು ಬಾಚಿದ ವ್ಯಕ್ತಿ.

ಉಮರ್ ಯು.ಎಚ್.: ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನಲ್ಲಿ ಸುಮಾರು 10 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಮಂಗಳೂರು, ಬಂಟ್ವಾಳ, ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಮ್ಮೇಳನಗಳ ಯಶಸ್ಸಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

►ಅಬ್ದುಲ್ ಅಝೀಝ್ ಬೈಕಂಪಾಡಿ: 14ನೇ ವಯಸ್ಸಿನಿಂದಲೇ ತುಳು ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ತೊಡಗಿದ್ದಾರೆ. ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನಲ್ಲಿ 3 ವರ್ಷ ಪ್ರಧಾನ ಕಾರ್ಯದರ್ಶಿ, ಬ್ಯಾರಿ ಕಲಾ ರಂಗ ಇದರ ಸ್ಥಾಪಕ ಅಧ್ಯಕ್ಷ, ಅಖಿಲ ಭಾರತ ಬ್ಯಾರಿ ಪರಿಷತ್‌ನ ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರಾಗಿದ್ದರು.

►ಬಿ.ಎಂ.ಹಸೈನಾರ್ ಕಡಂಬು: ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಬೆದ್ರಕಾಡುವಿನ ಬಿ.ಎಂ.ಹಸೈನಾರ್, ದ.ಕ. ಮತ್ತು ಕಾಸರಗೋಡು ಜಿಲ್ಲೆಯ ನಾನಾ ಪ್ರದೇಶಗಳಲ್ಲಿ ಕಳೆದ 35 ವರ್ಷಗಳಿಂದ ದಪ್ಪು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಿಾಯಿ ದಫ್ ರಾತೀಬುಗಳ ವಿದ್ಯೆಗಳನ್ನು ಕಲಿಸಿಕೊಟ್ಟು ಸಾವಿರಾರು ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರನ್ನು ಹೊಂದಿರುತ್ತಾರೆ. ಈಗಲೂ ಸದ್ರಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News