ಬಿಹಾರ ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್ ದಾಖಲು

Update: 2018-03-11 13:20 GMT

ಪಾಟ್ನ, ಮಾ.11: ಅರಾರಿಯ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಸಂದರ್ಭ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಪ್ರಚೋದನಕಾರಿ ರೀತಿಯಲ್ಲಿ ಭಾಷಣ ಮಾಡಿದ ದೂರಿನ ಹಿನ್ನೆಲೆಯಲ್ಲಿ ಬಿಹಾರ ಬಿಜೆಪಿ ಮುಖಂಡ ನಿತ್ಯಾನಂದ ರಾಯ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

 ನಿತ್ಯಾನಂದ ರಾಯ್ ಮಾ.9ರಂದು ನರ್ಪತ್‌ಗಂಜ್ ಎಂಬಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದಲ್ಲಿ , ಒಂದು ವೇಳೆ ಈ ಬಾರಿಯ ಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿ ಗೆದ್ದರೆ ಅರಾರಿಯ ಪ್ರದೇಶವು ಐಸಿಸ್ ಸಂಘಟನೆಯ ಸುರಕ್ಷಿತ ತಾಣವಾಗಲಿದೆ ಎಂದು ಹೇಳಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ನಿತ್ಯಾನಂದ ರಾಯ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರಾರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂಚಿಸಿದ್ದಾರೆ. ರಾಯ್ ಅವರು ಬಿಹಾರದ ಉಜಾರ್‌ಪುರ ಕ್ಷೇತ್ರದ ಸಂಸದರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News