ದ.ಕ. ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಯುವ ಘಟಕಕ್ಕೆ ಚಾಲನೆ

Update: 2018-03-15 08:55 GMT

ಮಂಗಳೂರು, ಮಾ.15: ಗ್ರಾಹಕ ಹಕ್ಕುಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ದ.ಕ. ಜಿಲ್ಲಾ ಮಟ್ಟದ ಗ್ರಾಹಕ ಸಂಘಟನೆಗಳ ಯುವ ಕೌನ್ಸಿಲ್‌ಗೆ (ಘಟಕ) ಇಂದು ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ವಿಶ್ವ ಗ್ರಾಹಕ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಡಿಎಂ ಕಾಲೇಜಿನ ಎಂಬಿಎ ವಿದ್ಯಾರ್ಥಿನಿ ನಿಖಿತಾ ನೇತೃತ್ವದಲ್ಲಿ ಘಟಕದ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಯುವ ಘಟಕಕ್ಕೆ ಚಾಲನೆ ದೊರೆಯಿತು.

ಕಾರ್ಯಕ್ರಮದಲ್ಲಿ ಬೈಕಂಪಾಡಿಯ ಬರ್ರ್ಟಾಂಡ್ ರಸ್ಸೆಲ್ ಶಾಲೆಯಿಂದ ತಯಾರಿಸಲಾದ ಗ್ರಾಹಕ ಹಕ್ಕುಗಳ ಬಗೆಗಿನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲೆಯ ಎಂಟು ಪದವಿ ಕಾಲೇಜುಗಳಲ್ಲಿ ಗ್ರಾಹಕ ಹಕ್ಕುಗಳ ಕುರಿತಂತೆ ಒಂದು ವರ್ಷದ ಸರ್ಟಿಫಿಕೆಟ್ ಕೋರ್ಸ್‌ಗಳನ್ನು ನಡೆಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ 245 ಮಂದಿ ಹಾಜರಾಗಿ 199 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಕೆನರಾ ಕಾಲೇಜಿನ ವಿದ್ಯಾರ್ಥಿನಿ ಶೈಮಾ ಅವರಿಗೆ ಚಿನ್ನದ ಪದಕ ಹಾಗೂ 2,500 ರೂ. ನಗದು ನೀಡಿ ಗೌರವಿಸಲಾಯಿತು.

ದ್ವಿತೀಯ ಸ್ಥಾನವನ್ನು ಎಸ್‌ಡಿಎಂ ಕಾಲೇಜಿನ ಸಮಂತ ಡಿಸೋಜ ಹಾಗೂ ತೃತೀಯ ಸ್ಥಾನವನ್ನು ಕಾವೂರು ಪದವಿ ಕಾಲೇಜಿನ ಜಯಶ್ರೀ ಪಡೆದಿದ್ದು, ಅವರಿಗೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ನೀಡಲಾಯಿತು.

ಇದೇ ವೇಳೆ ಗ್ರಾಹಕ ಹಕ್ಕುಗಳ ಕುರಿತಂತೆ ನಡೆದ ಪ್ರಾಜೆಕ್ಟ್ ವರ್ಕ್‌ನಲ್ಲಿ ಕಾವೂರು ಕಾಲೇಜು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದು, ಎಸ್‌ಡಿಎಂ ಮಂಗಳೂರು ಮತ್ತು ಕೆನರಾ ಕಾಲೇಜು ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನವನ್ನು ಹಂಚಿಕೊಂಡರು. ಅತ್ಯುತ್ತಮ ಕಾಲೇಜು ಗ್ರಾಹಕ ಕ್ಲಬ್ ಆಗಿ ಕಾವೂರು ಪದವಿ ಕಾಲೇಜು, ಶಾಲಾ ಮಟ್ಟದ ಗ್ರಾಹಕ ಕ್ಲಬ್ ಬಹುಮಾನವನ್ನು ಬರ್ಟ್ರಂಡ್ ರಸ್ಸೆಲ್ ಶಾಲೆ ಪಡೆಯಿತು.

ಶಾಲೆಗಳಲ್ಲಿ ಗ್ರಾಹಕ ಹಕ್ಕು ಪಠ್ಯವಾಗಬೇಕಿದೆ: ಡಾ.ಎಂ.ಆರ್. ರವಿ ಪ್ರತಿನಿತ್ಯದ ವ್ಯವಹಾರಗಳಲ್ಲಿ ನಾವು ನಮಗರಿವಿಲ್ಲದೆಯೇ ಮೋಸ ಹೋಗುತ್ತಿದ್ದೇವೆ. ವ್ಯವಹಾರಿಕ ಜ್ಞಾನದ ಕೊರತೆಯಿಂದ ಇಂತಹ ಮೋಸಗಳು ನಡೆಯುತ್ತಿದ್ದು, ಈ ಬಗ್ಗೆ ಶಾಲಾ ಹಂತದಲ್ಲಿಯೇ ಅರಿವು ಮೂಡಿಸಬೇಕಾಗಿದೆ. ಇದಕ್ಕಾಗಿ ಗ್ರಾಹಕ ಹಕ್ಕು ಶಾಲಾ ಪುಸ್ತಕಗಳಲ್ಲಿ ಪಠ್ಯವಾಗಬೇಕಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ. ರವಿ ಅಭಿಪ್ರಾಯಿಸಿದರು.

ವಿಶ್ವ ಗ್ರಾಹಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈಸ್ಕೂಲ್ ಮತ್ತು ಪಿಯುಸಿ ಪಠ್ಯರಚನೆಯ ಅವಕಾಶವನ್ನು ಕರ್ನಾಟಕ ಶಿಕ್ಷಣ ಇಲಾಖೆಯು ಹೊಂದಿದ್ದು, ಗ್ರಾಹಕ ಹಕ್ಕನ್ನು ಪಠ್ಯವಾಗಿಸುವ ಬಗ್ಗೆ ಇಲಾಖೆಯ ಗಮನ ಸೆಳೆಯಲು ತಾನೂ ಪ್ರಯತ್ನಿಸುವುದಾಗಿ ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನ ಗೌಡ, ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಎಂಬಿಎ ಪ್ರೋಗ್ರಾಂನ ಪ್ರೊಫೆಸರ್ ಡೈರೆಕ್ಟರ್ ಡಾ.ಶೇಖರ್ ಎಸ್.ಅಯ್ಯರ್, ಸುರತ್ಕಲ್ ಗೋವಿಂದ ದಾಸ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಮುರಳೀಧರ ರಾವ್, ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಯು. ತಾರಾ ರಾವ್, ಮೂಡುಬಿದಿರೆ ಧವಳ ಕಾಲೇಜಿನ ಪ್ರಾಂಶುಪಾಲ ರವೀಶ್ ಕುಮಾರ್ ಎಂ. ಮೊದಲಾವದರು ಉಪಸ್ಥಿತರಿದ್ದರು.

ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಜೆ.ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಕಚೇರಿ ಮುಖ್ಯಸ್ಥೆ ಸುನಂದಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News