ಮಾನವ ಹಕ್ಕುಗಳು ಶೋಷಿತ ವರ್ಗದವರ ಪಾಲಿನ ನಂದಾದೀಪ: ಸುಭಾಷ್ಚಂದ್ರ ಅತ್ರಾಡಿ
ಕುಂದಾಪುರ, ಮಾ.17: ಪ್ರತಿಯೊಂದು ಜೀವಿಗೆ ಬದುಕುವ ಹಕ್ಕಿದೆ. ಸ್ವತಂತ್ರ ಜೀವನ ನಡೆಸುವ ವಾಸಿಸುವ ಓಡಾಡುವ ಹಕ್ಕಿದೆ. ಇವುಗಳ ರಕ್ಷಣೆ ಮತ್ತು ಪೋಷಣೆ ಇಂದಿನ ಸಮಾಜಕ್ಕೆ ತುಂಬಾ ಅಗತ್ಯ ಎಂದು ವಿಜಯ ಮಕ್ಕಳ ಕೂಟ ಪ್ರಾಥಮಿಕ ಶಾಲೆಯ ಪ್ರಧಾನ ಸಂಚಾಲಕ ಸುಭಾಷ್ ಚಂದ್ರ ಶೆಟ್ಟಿ ಅತ್ರಾಡಿ ನುಡಿದರು.
ಅವರು ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯ ಕೋಡಿಯಲ್ಲಿ ಆಯೋಜಿಸಲಾಗಿದ್ದ ಮಾನವ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಭಾರತದಂತಹ ರಾಷ್ಟ್ರದಲ್ಲಿ ಬುದ್ದ-ಮಹಾವೀರ ಬಸವೇಶ್ವರರಂತಹ ಮಾಹನ್ ವ್ಯಕ್ತಿಗಳು ವರ್ಣವ್ಯವಸ್ಥೆಯ ವಿರುದ್ಧ ಹೋರಾಡುವ ಮೂಲಕ ಸಮಾನತೆಯ ತತ್ವವನ್ನು ಎತ್ತಿಹಿಡಿಯಲು ಪ್ರಯತ್ನಿಸಿದರು. ಇಂದು ಸಮಾನತೆಯ ವ್ಯಕ್ತಿ ಸ್ವಾತಂತ್ರವೆನ್ನುವುದು ಸಂವಿಧಾನ ಬದ್ದವಾಗಿ ಶೋಷಿತ ವರ್ಗದವರ ಪಾಲಿಗೆ ನಂದಾದೀಪದಂತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್. ಮಾತನಾಡಿ, ರಾಷ್ಟ್ರದ ಪ್ರತಿಯೋರ್ವ ಪ್ರಜೆಗಳು ತಮ್ಮ ಹಕ್ಕುಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು ಶಿಕ್ಷಣದ ಮೂಲಕ ಮಾನವಹಕ್ಕುಗಳ ಜನಜಾಗೃತಿ ಆಗಬೇಕು ಎಂದರು.
ಉಪನ್ಯಾಸಕ ಅನಂತ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಪ್ರಾರ್ಥನಾಗೀತೆ ಹಾಡುದರು. ಸೌಮ್ಯಾ ಕೆ.ಎಲ್. ಸ್ವಾಗತಿಸಿದರು. ಮುಝ್ಮಾ ವಂದಿಸಿದರು. ಕುಮಾರ ನಾಗರಾಜ್ ರಾವ್ ಕೆ. ಕಾರ್ಯಕ್ರಮ ನಿರೂಪಿಸಿದರು.