ದೇವೇಂದ್ರ ಫಡ್ನವೀಸ್ ಪತ್ನಿಯ ಪತಾಂಜಲಿ ಹೇಳಿಕೆ: ಎನ್‌ಸಿಪಿಯಿಂದ ಪ್ರತಿಭಟನೆ

Update: 2018-03-19 14:21 GMT
ಅಮೃತ ಫಡ್ನವೀಸ್

ಮುಂಬೈ, ಮಾ.19: ಪತಾಂಜಲಿ ಉತ್ಪನ್ನಗಳನ್ನು ಹೊಗಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತ ಫಡ್ನವೀಸ್ ವಿರುದ್ಧ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ದ ಕಾರ್ಯಕರ್ತರು ರವಿವಾರ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರದ ಸೋಲಾಪುರದಲ್ಲಿ ಪತಾಂಜಲಿ ಆಯುರ್ವೇದ ಉತ್ಪನ್ನಗಳ ಪ್ರಚಾರಾರ್ಥ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಫಡ್ನವೀಸ್ ಮತ್ತು ನಟಿ ಮತ್ತು ರಾಜಕಾರಣಿ ಹೇಮಮಾಲಿನಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅಮೃತ ಫಡ್ನವೀಸ್, ಜನರಿಗೆ ಪತಾಂಜಲಿ ಉತ್ಪನ್ನಗಳ ಬಗ್ಗೆ ಕುರುಡು ನಂಬಿಕೆಯಿದೆ ಮತ್ತು ಈ ಸಂಸ್ಥೆಗೆ ಬರುವ ಆದಾಯವನ್ನು ದೇಶದ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅವರ ಈ ಹೇಳಿಕೆಯ ವಿರುದ್ಧ ಎನ್ಸಿಪಿಯ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದರು. ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ರಾಜ್ಯದಲ್ಲಿ ಮಾರುಕಟ್ಟೆ ಒದಗಿಸದೆ ಇರುವಾಗ ಪತಾಂಜಲಿಯ ಉತ್ಪನ್ನಗಳಿಗೆ ಹೇಗೆ ಮಾರುಕಟ್ಟೆ ಒದಗಿಸಲಾಗಿದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ನಂತರ ಬಿಡುಗಡೆ ಮಾಡಿದ್ದಾರೆ. ಅವರ ವಿರುದ್ಧ ಯಾವ ದೂರನ್ನೂ ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಂಕರ್ ಆಗಿರುವ ಅಮೃತ ಫಡ್ನವೀಸ್ ಹಿನ್ನೆಲೆ ಗಾಯಕಿಯೂ ಆಗಿದ್ದಾರೆ. ಸಿನೆಮಾಗಳಲ್ಲಿ ಹಲವು ಹಾಡುಗಳನ್ನು ಹಾಡಿರುವ ಆಕೆ ವಿವಿಧ ಸಾಮಾಜಿಕ ಕಾರ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News