ಚೆಂಡು ವಿರೂಪಗೊಳಿಸುವ ಪ್ಲ್ಯಾನ್ ಇತ್ತೆಂದು ಒಪ್ಪಿಕೊಂಡ ಆಸೀಸ್ ನಾಯಕ ಸ್ಮಿತ್

Update: 2018-03-24 18:06 GMT

ಕೇಪ್‌ಟೌನ್, ಮಾ.24: ದಕ್ಷಿಣ ಆಫ್ರಿಕ ವಿರುದ್ಧ ಮೂರನೇ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ಆಸ್ಟ್ರೇಲಿಯದ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ ಘಟನೆ ನಡೆದಿದೆ. ಆಸೀಸ್ ನಾಯಕ ಸ್ಟೀವನ್ ಸ್ಮಿತ್ ಚೆಂಡು ವಿರೂಪಗೊಳಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

ತಂಡದ ‘ಮುಖಂಡರ ವಿಭಾಗ’ದ ಉದ್ದೇಶಪೂರ್ವಕ ಯೋಜನೆ ಇದಾಗಿತ್ತು ಎಂದು ಹೇಳಿದ ಸ್ಮಿತ್ ಆದರೆ ತಾನು ನಾಯಕತ್ವದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದರು.

‘‘ಮುಖಂಡರ ವಿಭಾಗಕ್ಕೆ ಈ ಬಗ್ಗೆ ಅರಿವಿದೆ. ಏನು ನಡೆದಿದೆಯೋ ಅದರ ಬಗ್ಗೆ ನನಗೆ ಹೆಮ್ಮೆಯಿಲ್ಲ. ಇದು ಕ್ರೀಡಾ ಸ್ಫೂರ್ತಿಯ ವರ್ತನೆಯಲ್ಲ. ತಂಡದ ಸಮಗ್ರತೆಗೆ ಇದರಿಂದ ಹಾನಿಯಾಗಿದೆ. ಇದು ಮತ್ತೊಮ್ಮೆ ಪುನರಾವರ್ತನೆಯಾಗದು ಎಂದು ಭರವಸೆ ನೀಡುತ್ತೇನೆ’’ ಎಂದು ಸ್ಮಿತ್ ಹೇಳಿದ್ದಾರೆ.

ಬ್ಯಾಂಕ್ರಾಫ್ಟ್ ತನ್ನ ಕಿಸೆಯಿಂದ ‘ಸ್ಯಾಂಡ್ ಪೇಪರ್’ನಂತಹ ವಸ್ತುವೊಂದನ್ನು ತೆಗೆದು ಚೆಂಡಿಗೆ ಉಜ್ಜುವ ಮೂಲಕ ಹೊಳಪು ನೀಡಲು ಪ್ರಯತ್ನಿಸಿರುವುದು ಟಿವಿ ಫುಟೇಜ್‌ನಲ್ಲಿ ಕಂಡು ಬಂದ ಬಳಿಕ ಅಂಪೈರ್‌ಗಳು ಅವರನ್ನು ಪ್ರಶ್ನಿಸಿದರು. ಆಗ ಅವರು ಆ ವಸ್ತುವನ್ನು ತನ್ನ ಕಿಸೆಯಲ್ಲಿ ತುರುಕಿಸಿದ ಬಳಿಕ ಅಂಪೈರ್‌ಗೆ ಒಂದು ಕಪ್ಪು ವಸ್ತ್ರವನ್ನು ತೆಗೆದು ತೋರಿಸಿದರು. ನಂತರ ಆಟ ಮುಂದುವರಿದಿತ್ತು. ದಿನದಾಟ ಮುಗಿದ ಬಳಿಕ ಐಸಿಸಿ ಬ್ಯಾಂಕ್ರಾಫ್ಟ್ ಮೇಲೆ ದೂರು ದಾಖಲಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News