ಭಟ್ಕಳ: ಕಾಂಗ್ರೆಸ್ ಅಭ್ಯರ್ಥಿ ಮಾಂಕಾಳ್ ವೈದ್ಯ ನಾಮಪತ್ರ ಸಲ್ಲಿಕೆ

Update: 2018-04-23 15:25 GMT

ಭಟ್ಕಳ, ಎ. 23: ಮೇ.12ರಂದು ನಡೆಯಲಿರುವ ಭಟ್ಕಳ ವಿಧಾನ ಸಭಾ ಚುನಾವಣೆಗೆ 79ನೆ ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಮಂಕಾಳ ವೈದ್ಯ ಸೋಮವಾರ ನಾಮಪತ್ರ ಸಲ್ಲಿಸಿದರು.

ತಮ್ಮ ಸೂಚಕರೊಂದಿಗೆ ಆಗಮಿಸಿದ್ದ ಮಂಕಾಳ ವೈದ್ಯ ಅವರು ನೇರವಾಗಿ ಚುನಾವಣಾಧಿಕಾರಿ ಎನ್. ಸಿದ್ಧೇಶ್ವರ ಅವರಲ್ಲಿ ತೆರಳಿ ನಾಮ ಪತ್ರವನ್ನು ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇನ್ನೂ ಹಲವಾರು ಕೆಲಸ ಬಾಕಿ ಇದ್ದು ಅವಧಿ ಸಾಕಾಗಿಲ್ಲ. ಪ್ರಥಮ ಎರಡು ವರ್ಷಗಳಲ್ಲಿ ಶಾಸಕನಾಗಿ ಕಲಿಯ ಬೇಕಾಯಿತು. ನಂತರ ಎಲ್ಲೆಲ್ಲಿ ಸರಕಾರದಿಂದ ಹಣ ತಂದು ಅಭಿವೃದ್ಧಿ ಮಾಡಬಹುದು ಎಂದು ತಿಳಿದ ಮೇಲೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಅಭಿವೃದ್ಧಿ ಮಾಡಲು ಜನರ ಸಹಕಾರ ದೊರೆತಿದೆ. ಎಲ್ಲೆಲ್ಲಿ ಕಾಮಗಾರಿ ಗಳಾಗಬೇಕು ಎನ್ನುವುದನ್ನು ಜನರು ಹೇಳಿದಾಗ ತಿಳಿಯುತ್ತದೆ. ಅಂತಹ ಎಲ್ಲಾ ಕಡೆಗಳಲ್ಲಿಯೂ ಕಾಮಗಾರಿ ಮಾಡಿದ್ದೇನೆ. ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಬಾಕಿ ಇದ್ದು ಮುಂದಿನ ಬಾರಿ ಅವುಗಳನ್ನು ಪೂರ್ಣಗೊಳಿಸುತ್ತೇನೆ.  ಕಳೆದ ಐದು ವರ್ಷಗಳಲ್ಲಿ ಜನ ಸೇವೆಯನ್ನು ಮಾಡುತ್ತಲೇ ಬಂದಿದ್ದೇನೆ ಆದರೆ ಇನ್ನೂ ನನಗೆ ತೃಪ್ತಿ ತಂದಿಲ್ಲ, ಕ್ಷೇತ್ರದಲ್ಲಿನ ಎಲ್ಲಾ ಕೆಲಸಗಳನ್ನು ಮಾಡಿದಾಗ ಮಾತ್ರ ನನಗೆ ತೃಪ್ತಿಯಾಗುವುದು ಎಂದರು. ಮತದಾರರಿಗೆ ತೃಪ್ತಿ ತರುವಂತಹ ಕೆಲಸ ಮಾಡಬೇಕೆಂದಿದ್ದೇನೆ ಎಂದರು.

ಎ. 26ರಂದು ರಾಹುಲ್ ಗಾಂಧಿ ಭಟ್ಕಳಕ್ಕೆ

ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬರುತ್ತಿದ್ದಾರೆ. ಎ.26ರಂದು ಬೆಳಿಗ್ಗೆ ಗೋವಾ ಮೂಲಕ ಆಗಮಿಸುವ ಅವರು ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ ಹಾಗೂ ಹೊನ್ನಾವರಗಳಲ್ಲಿ ರೋಡ್ ಶೋ ನಡೆಸುತ್ತಾರೆ. ನಂತರ ಸಂಜೆ 7 ಗಂಟೆಗೆ ಭಟ್ಕಳಕ್ಕೆ ಆಗಮಿಸಿ ಇಲ್ಲಿ ಸಭೆಯನ್ನು ನಡೆಸಲಿದ್ದು ಸಾವಿರಾರು ಜನರು ಸೇರುತ್ತಾರೆ ಎನ್ನುವ ನಿರೀಕ್ಷೆ ಇದೆ. ನಂತರ ರಾತ್ರಿ ಮುರ್ಡೇಶ್ವರದಲ್ಲಿ ತಂಗುವ ಅವರು ಎ.27ರಂದು ಉಡುಪಿಗೆ ತೆರಳುವರು ಎಂದೂ ಹೇಳಿದರು.

ಮಂಕಾಳ ವೈದ್ಯ ಕಾರಿಗೆ ಅಡ್ಡಗಟ್ಟಿದ ಬಿಜೆಪಿ ಕಾರ್ಯಕರ್ತರು

ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಅವರು ನಾಮ ಪತ್ರ ಸಲ್ಲಿಸುವ ವೇಳೆಯಲ್ಲಿ ಮೆರವಣಿಗೆಯ ಮೂಲಕ ಬಂದಿದ್ದ ಕಾರ್ಯಕರ್ತರು ಚುನಾವಣಾಧಿಕಾರಿಗಳ ಕಚೇರಿಗೆ ತೆರಳುವ ಮಾರ್ಗದಲ್ಲಿ ಜಮಾವಣೆ ಗೊಂಡಿದ್ದು ರಸ್ತೆಯನ್ನು ಬಂದ್ ಮಾಡಿ ಘೋಷಣೆಯನ್ನು ಕೂಗುತ್ತಿದ್ದರು. ಇದೇ ವೇಳೆ ನಾಮ ಪತ್ರ ಸಲ್ಲಿಸಿ ವಾಪಾಸಾಗುತ್ತಿದ್ದ ಶಾಸಕ ಮಂಕಾಳ ವೈದ್ಯ ಅವರ ಕಾರನ್ನು ಅಡ್ಡಗಟ್ಟಿದ ಕಾರ್ಯಕರ್ತರು ಅವರಿಗೆ ಘೆರಾವ್ ಹಾಕಿದರು.

ಇದೇ ಸಂದರ್ಭದಲ್ಲಿ ಮೋದಿ ಮೋದಿ ಎಂದು ಕೂಗಿದ ಕಾರ್ಯಕರ್ತರು ಪೊಲೀಸರ ಮಾತನ್ನೂ ಕೇಳದೇ ಕೆಲ ಕಾಲ ರಸ್ತೆಯನ್ನು ಬಿಟ್ಟು ಕೊಡದೇ ಗೊಂದಲ ಸೃಷ್ಟಿಸಲು ಕಾರಣರಾದರು. ನಂತರ ಮಧ್ಯ ಪ್ರವೇಶಿಸಿದ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜ, ಸಿ.ಆರ್.ಪಿ.ಎಫ್. ಪಡೆಯ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ ಮಂಕಾಳ ವೈದ್ಯಅವರಿಗೆ ದಾರಿ ಸುಗಮಗೊಳಿಸಿದರು.

ಬಿ.ಜೆ.ಪಿ. ಸಂಸ್ಕೃತಿ ಮಂಕಾಳ ವೈದ್ಯ: ನಾಮ ಪತ್ರ ಸಲ್ಲಿಸಿ ವಾಪಾಸಾಗುವಾಗ ದಾರಿಯಲ್ಲಿ ನೂರಾರು ಜನರು ಸೇರಿ ನಮ್ಮ ಕಾರನ್ನು ಅಡ್ಡಗಟ್ಟಿ ಮೋದಿ ಮೋದಿ ಎಂದು ಘೋಷಣೆ ಕೂಗಿರುವುದು ಉತ್ತಮ ಸಂಸ್ಕೃತಿಯವರ ಲಕ್ಷಣವಲ್ಲ. ಇದು ಬಿ.ಜೆ.ಪಿಯವರ ಹತಾಷ ಭಾವನೆಯನ್ನು ತೋರಿಸುತ್ತದೆ ಎಂದು ಶಾಸಕ ಮಂಕಾಳ ವೈದ್ಯ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರಿಗೆ ವಿಷಯ ತಿಳಿಸಿದ ಅವರು ನಾಮ ಪತ್ರ ಸಲ್ಲಿಸಿದ್ದೇ ಇಷ್ಟೋಂದು ದಾಂಧಲೆ ಮಾಡುವ ಇವರು ನಾಳೆ ಕ್ಷೇತ್ರದಲ್ಲಿ ಗೆದ್ದು ಬಂದರೆ ಇನ್ನೇನು ಮಾಡಬಹುದೆಂದು ಜನತೆಯೇ ತೀರ್ಮಾನ ಮಾಡಬೇಕು. ನಮ್ಮ ಸಂಸ್ಕೃತಿ ಸರಳ ಹಾಗೂ ಸಜ್ಜನಿಕೆಯದು. ಅವರು ಕಾರನ್ನು ಅಡ್ಡಗಟ್ಟಿ ಘೋಷಣೆ ಕೂಗಿರುವುದರ ಹಿಂದೆ ಬಿಜೆಪಿ ಪ್ರಭಾವಿಗಳ ಕೈವಾಡ ಇದೆ ಎಂದ ಅವರು ತಾವು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಬಿ.ಜೆ.ಪಿಯವರ ಸಂಸ್ಕೃತಿ ಎನೆಂದು ಜನರೇ ತೀರ್ಮಾನಿಸಲಿದ್ದಾರೆ ಎಂದೂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News