ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕಾಂಗ್ರೆಸ್‌ನ ಇಬ್ಬರು ಮುಖಂಡರ ವಿರುದ್ಧ ದೂರು

Update: 2018-04-23 17:19 GMT

ಬಂಟ್ವಾಳ, ಎ. 23: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕಾಂಗ್ರೆಸ್‌ನ ಇಬ್ಬರು ಮುಖಂಡರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್‌ನ ಮುಖಂಡರಾದ ಮುಹಮ್ಮದ್ ನಂದಾವರ ಹಾಗೂ ಗೋವಿಂದ ರಾವ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಈ ದೂರು ದಾಖಲಾಗಿದೆ.

ಎ. 22ರಂದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಕರ್ಪೆ ಗ್ರಾಮದ ಮಾರ್ಗದಂಗಡಿ ಗೋವಿಂದ ರಾವ್ ಎಂಬವರ ಮನೆಯಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆ ನಡೆಸಲಾಗಿತ್ತು. ಈ ಸಂಬಂಧ ಸಭೆಗೆ ಬಂದ ಪಕ್ಷದ ಕಾರ್ಯಕರ್ತರಿಗೆ ಅನುಮತಿ ಇಲ್ಲದೆ ಚಹಾ ಮತ್ತು ತಿಂಡಿಯನ್ನು ವಿತರಿಸಲಾಗಿದೆ ಎಂದು ಆರೋಪಿಸಿ ಎಆರ್‌ಒ ಅವರು ದೂರು ನೀಡಿದ್ದಾರೆ.

ಈ ಸಂಬಂಧ ಕಾರ್ಯಕ್ರಮಕ್ಕೆ ಅನುಮತಿ ಪಡೆದ ಮುಹಮ್ಮದ್ ನಂದಾವರ ಮತ್ತು ಸಭೆಗೆ ಸ್ಥಳಾವಕಾಶ ನೀಡಿದ ಗೋವಿಂದ ರಾವ್ ಅವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News