ಪತ್ನಿಗೆ ಚೂರಿ ಇರಿತ: ಆರೋಪಿ ಪತಿಯ ಬಂಧನ

Update: 2018-04-28 16:31 GMT

ಮಂಗಳೂರು, ಎ. 28: ಪತಿಯೇ ಪತ್ನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ನಗರದ ಅತ್ತಾವರದ ವೈದ್ಯನಾಥ ದೇವಳದ ಬಳಿ ಶುಕ್ರವಾರ ನಡೆದಿದೆ.

ಅತ್ತಾವರದ ವೈದ್ಯನಾಥ ದೇವಳದ ನಿವಾಸಿ ವಿನೋದ್ (33) ಆರೋಪಿಯಾಗಿದ್ದು, ಈತನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಈತನ ಪತ್ನಿ ರಾಜೇಶ್ವರಿ ಚೂರಿ ಇರಿತದಿಂದ ಗಾಯಗೊಂಡವರು. ಕೈಗೆ ಗಂಭೀರ ಗಾಯಗೊಂಡಿರುವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜೇಶ್ವರಿ ಆರೋಪಿ ವಿನೋದ್‌ನ ಎರಡನೇ ಪತ್ನಿ ಎನ್ನಲಾಗಿದೆ. ಈಕೆಯೊಂದಿಗೆ ವಾಸವಾಗಿರುವ ವಿನೋದ್ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನೆನ್ನಲಾಗಿದೆ. ಅದೇರೀತಿ ಗಲಾಟೆ ಮಾಡಿ ಕೆಲವು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ವಿನೋದ್ ಶುಕ್ರವಾರ ಮನೆಗೆ ವಾಪಸಾಗಿದ್ದು, ಮನೆ ಬಾಡಿಗೆ ವಿಚಾರವಾಗಿ ಪತ್ನಿಯೊಂದಿಗೆ ತಗಾದೆ ತೆಗೆದಿದ್ದಾನೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕೋಪಗೊಂಡ ವಿನೋದ್ ಪತ್ನಿ ರಾಜೇಶ್ವರಿಗೆ ಚೂರಿಯಿಂದ ಇರಿದಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News