ಪರೋಲ್ ಮೇಲೆ ಬಿಡುಗಡೆಗೊಂಡು ತಲೆಮರೆಸಿಕೊಂಡಿದ್ದ ಜೀವಾವಧಿ ಆರೋಪಿಯ ಬಂಧನ

Update: 2018-04-28 17:59 GMT

ಕಡಬ, ಎ.28: ಕೊಲೆ‌ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ 2006ರಲ್ಲಿ ಪರೋಲ್ ಮೇಲೆ ಬಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಠಾಣಾ ಪೊಲೀಸರ ಸಹಕಾರದೊಂದಿಗೆ ಚಿಕ್ಕಮಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಠಾಣಾ ವ್ಯಾಪ್ತಿಯಲ್ಲಿ 2002ರಲ್ಲಿ ಕೊಲೆ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ಅಬ್ದುಲ್ ಘನಿ(40) ಬಂಧಿತ ಕೈದಿ. ಪರೋಲ್ ಮೇಲೆ ಜೈಲಿನಿಂದ ಬಂದಿದ್ದ ಈತ ಆ ನಂತರ ತಲೆಮರೆಸಿಕೊಂಡಿದ್ದನೆನ್ನಲಾಗಿದೆ. ಆ ನಂತರ ತನ್ನ ಹೆಸರನ್ನು ಶಾಕಿರ್ ಎಂದು ಗುರುತಿಸಿಕೊಂಡು ಕಳೆದ ಸುಮಾರು ಹನ್ನೊಂದು ವರ್ಷಗಳ ಹಿಂದೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪೆರ್ಜಿ ಎಂಬಲ್ಲಿನ ಮಹಿಳೆಯನ್ನು ವಿವಾಹವಾಗಿದ್ದ ಈತ ಇಲ್ಲಿಯೇ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನೆನ್ನಲಾಗಿದೆ‌. 2017 ರ ನವೆಂಬರ್ ತಿಂಗಳಲ್ಲಿ ರಾಮಕುಂಜದಲ್ಲಿ ಆಡು ಕದ್ದು ಸಿಕ್ಕಿಬಿದ್ದಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ‌.

ಆರೋಪಿಯು ಕಡಬ ಠಾಣಾ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶನಿವಾರ ಕಡಬಕ್ಕೆ ಆಗಮಿಸಿದ ಚಿಕ್ಕಮಗಳೂರು ಪೊಲೀಸರು ಕಡಬ ಠಾಣಾ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಕಾರ್ಯಾಚರಣೆಯಲ್ಲಿ ಕಡಬ ಠಾಣಾ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ, ಸಿಬ್ಬಂದಿಯಾದ ತಾರಾನಾಥ, ಶಿವಪ್ರಸಾದ್, ಸತೀಶ್, ಜೀಪ್ ಚಾಲಕ ಕನಕರಾಜ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News