ದುಬೈ: ಸಮುದ್ರದಲ್ಲಿ ಮುಳುಗಿ ಚೆಂಗಳದ ಯುವಕ ಮೃತ್ಯು

Update: 2018-05-04 05:45 GMT

ಕಾಸರಗೋಡು, ಮೇ 4: ದುಬೈಯ ಜುಮೈರಾ ಬೀಚ್‌ನಲ್ಲಿ ಸ್ನಾನಕ್ಕಿಳಿದ ಕಾಸರಗೋಡು ಮೂಲದ ಯುವಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿರುವುದು ವರದಿಯಾಗಿದೆ. ಈ ಸಂದರ್ಭ ಜೊತೆಯಲ್ಲಿದ್ದ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

 ಚೆಂಗಳ ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಎಂಬವರ ಪುತ್ರ ಶಕೀರ್ ಸೈಫ್ ( 24) ಮೃತಪಟ್ಟ ಯುವಕ. ದುಬೈಯಲ್ಲಿ ಸಂಬಂಧಿಕರೊಬ್ಬರ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಶಕೀರ್ ಗುರುವಾರ ರಾತ್ರಿ ಕೆಲಸ ಮುಗಿಸಿ ಇನ್ನಿಬ್ಬರು ಸ್ನೇಹಿತರ ಜೊತೆ ಕಾರಿನಲ್ಲಿ ಜುಮೈರಾ ಬೀಚ್‌ಗೆ ತೆರಳಿದ್ದರು. ಅಲ್ಲಿ ಸಮುದ್ರದಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಇನ್ನಿಬ್ಬರನ್ನು ಅಲ್ಲಿದ್ದವರು ರಕ್ಷಿಸಿದರೂ ಶಕೀರ್ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟರೆನ್ನಲಾಗಿದೆ.

ಪೊಲೀಸರು ಹಾಗೂ ಬೀಚ್‌ನಲ್ಲಿ ಸೇರಿದ್ದವರ ಸಹಾಯದಿಂದ ಮೃತದೇಹವನ್ನು ಮೇಲೆತ್ತಲಾಗಿದೆ.

ನಾಲ್ಕು ವರ್ಷಗಳಿಂದ ದುಬೈಯಲ್ಲಿ ಉದ್ಯೋಗದಲ್ಲಿರುವ ಶಕೀರ್ ಆರು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಹಿಂದಿರುಗಿದ್ದರು. ಮೃತದೇಹವನ್ನು ಊರಿಗೆ ತರಲು ಸಿದ್ಧತೆ ನಡೆಯುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News