ಅಲ್ ಜುಬೈಲ್‌ : ಭೀಕರ ರಸ್ತೆ ಅಪಘಾತಕ್ಕೆ ಕಿನ್ನಿಗೋಳಿಯ ಯುವಕ ಮೃತ್ಯು

Update: 2018-05-07 18:27 GMT

ಮಂಗಳೂರು, ಮೇ 7: ಸೌದಿಅರೇಬಿಯಾದ ಅಲ್ ಜುಬೈಲ್ - ಅಲ್ ತುರೈಫ್ ಹೆದ್ದಾರಿಯಲ್ಲಿ ರವಿವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಯುವಕ ಸ್ಥಳದಲ್ಲೇ ಮೃತಪಟಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ತಾಲೂಕಿನ ಕಿನ್ನಿಗೋಳಿ ಅತ್ತೂರು ನಿವಾಸಿ ಅಬ್ದುಲ್ ರಹ್ಮಾನ್ ಎಂಬವರ ಪುತ್ರ ಮುಹಮ್ಮದ್ ರಾಹಿಲ್(24) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮತ್ತೋರ್ವನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಸೌದಿ ಅರೆಬಿಯಾದ ಅಲ್ ಜುಬೈಲ್‌ನಲ್ಲಿರುವ ಸಅದ್ ಅಲ್ ಕಥಾನಿ ಕಂಪೆನಿಯಲ್ಲಿ ಕೊ- ಆಡಿನೇಟರ್ ಆಗಿ ಉದ್ಯೋಗದಲ್ಲಿದ್ದ ರಾಹಿಲ್, ಕೆಲಸದ ನಿಮಿತ್ತ ತನ್ನ ಸಹೋದ್ಯೋಗಿಯೊಂದಿಗೆ ಅಲ್ ಜುಬೈಲ್ - ಅಲ್ ತುರೈಫ್ ರಾಷ್ಟ್ರೀಯ ಹೆದ್ದಾರಿಯಾಗಿ ತುರೈಫ್‌ಗೆ ಕಾರಿನಲ್ಲಿ ರವಿವಾರ ರಾತ್ರಿ ಪ್ರಯಾಣ ಬೆಳೆಸಿದ್ದರು.
ಕಾರು ಚಲಾಯಿಸುತ್ತಿದ್ದ ರಾಹಿಲ್, ಅಫ್ರಲ್‌ಬಾತಿನ್ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ನಿದ್ದೆಗೆ ಜಾರಿದರೆನ್ನಲಾಗಿದ್ದು, ಪರಿಣಾಮ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಢಿಕ್ಕಿಯಿಂದ ಕಾರು ಲಾರಿಯ ಅಡಿಭಾಗವಾಗಿ ಸಂಪೂರ್ಣ ಒಳಹೊಕ್ಕಿದ್ದು ರಾಹಿಲ್ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.

ಸಹೋದ್ಯೋಗಿ ಕಾರಿನ ಸೀಟು ಬಿಡಿಸಿ ಮಲಗಿದ್ದ ಕಾರಣ ಸಣ್ಣ ಪ್ರಮಾಣದ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಕಾರಿನ ಮೇಲ್ಛಾವಣಿ ಸಹಿತ ಕಾರು ಸಂಪೂರ್ಣ ಧ್ವಂಸಗೊಂಡಿದೆ ಎಂದು ತಿಳಿದು ಬಂದಿದೆ.

ಗುರುವಾರ ಮೃತದೇಹ ಮಂಗಳೂರು ತಲುಪುವ ಸಾಧ್ಯತೆ:
ಸೌದಿ ಅರೇಬಿಯಾದ ಅಲ್ ಜುಬೈಲ್ - ಅಲ್ ತುರೈಫ್ ರಾಷ್ಟ್ರೀಯ ಹೆದ್ದಾರಿಯ ತುರೈಫ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ರಾಹಿಲ್‌ನ ಮೃತದೇಹ ಗುರುವಾರ ಮಂಗಳೂರು ತಲುಪುವ ಸಾಧ್ಯತೆ ಇದೆ ಎಂದು ಆತನ ಚಿಕ್ಕಪ್ಪ ಹಮೀದ್ ಅತ್ತೂರು ತಿಳಿಸಿದ್ದಾರೆ.

ಮೃತದೇಹವನ್ನು ತವರೂರಿಗೆ ತರುವ ನಿಟ್ಟಿನಲ್ಲಿ ದಾಖಲೆ ಪತ್ರಗಳ ಕಾರ್ಯಗಳು ನಡೆಯುತ್ತಿದ್ದು, ಈ ಪ್ರಕ್ರಿಯೆ ಮುಗಿಯಲು 2 ದಿನಗಳು ಬೇಕಾಗಬಹುದು. ಆ ಬಳಿಕ ಗುರವಾರ ಬೆಳಗ್ಗಿನ ಜಾವ 4ಗಂಟೆಯ ಸುಮಾರಿಗೆ ಮೃತದೇಹ ಅತ್ತೂರಿನ ಮನೆ ತಲುಪಲಿದೆ ಎಂದು 'ವಾರ್ತಾಭಾರತಿ'ಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News