ಮೊಯ್ದಿನ್ ಬಾವ ಯಶಸ್ವಿ ನಾಯಕ: ಸುರಲ್ಪಾಡಿ ಅಬ್ದುಲ್ ಮಜೀದ್

Update: 2018-05-09 08:33 GMT

ಸುರತ್ಕಲ್, ಮೇ 9: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವು ಮಂಗಳೂರು ನಗರ ಹಾಗು ತಾಲೂಕಿನ ಹಲವಾರು ಗ್ರಾಮ ಪಂಚಾಯತ್ ಗಳನ್ನು ಒಳಗೊಂಡ ಕ್ಷೇತ್ರ. ಈ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಗರ ಹಾಗು ಗ್ರಾಮಾಂತರ ವಾಸಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಸಮಾಜಸೇವೆ, ರಾಜಕೀಯ ಪಕ್ಷದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೊಯ್ದಿನ್ ಬಾವ ಯೋಗ್ಯ ಎಂದು ಆಯ್ಕೆ ಮಾಡಿ ಕಳುಹಿಸಿದರು. ಮೊಯ್ದಿನ್ ಬಾವ ಓರ್ವ ಯಶಸ್ವಿ ನಾಯಕ ಎಂದು ಗುರುಪುರ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸುರಲ್ಪಾಡಿ ಅಬ್ದುಲ್ ಮಜೀದ್. 

ಈ ಬಗ್ಗೆ ಮಾತನಾಡಿದ ಅವರು ಜನರ ಆಯ್ಕೆಗೆ ಧಕ್ಕೆ ತರಬಾರದು ಎಂದು ಕಳೆದ 5 ವರ್ಷಗಳಿಂದ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ಯುವ ನಾಯಕ ಮೊಯ್ದಿನ್ ಬಾವ. ಹೊಸ ಹೊಸ ಚಿಂತನೆ, ಆ ಮೂಲಕ ಹೊಸ ಹೊಸ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯಾದ ನಾಯಕ ಅವರು ಎಂದು ಅಬ್ದುಲ್ ಮಜೀದ್ ಹೇಳಿದರು. 

ಸರಕಾರ, ಮುಖ್ಯಮಂತ್ರಿ, ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರ ಮೇಲೆ ನಿರಂತರ ಒತ್ತಡವನ್ನು ಹಾಕಿ ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಅನುಷ್ಠಾನಗೊಳಿಸಿದ ಭಗೀರಥ. ಹಲವು ವರ್ಷಗಳಿಂದ ಬಾಕಿ ಇದ್ದ ಕುಡಿಯುವ ನೀರಿನ ಯೋಜನೆ, ರಸ್ತೆ, ಚರಂಡಿ, ಹಕ್ಕುಪತ್ರ, ವಸತಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಪ್ರವಾಸೋದ್ಯಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಭೂತಪೂರ್ವ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಜನಪ್ರತಿನಿಧಿ. ಜಾತಿ ಮತ ಬೇಧವಿಲ್ಲದೆ ಎಲ್ಲರೊಂದಿಗೂ ಮಾನವೀಯತೆಯನ್ನು ಮೆರೆದು ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯರಾಗಿದ್ದಾರೆ ಬಾವ ಅವರು. ಕ್ಷೇತ್ರದಲ್ಲಿ 22 ಶ್ರೀ ನಾರಾಯಣ ಗುರು ಭವನ, ಹಲವಾರು ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ಅನುದಾನ ನೀಡಿ, ರಸ್ತೆ ಸಂಪರ್ಕವನ್ನು ಮಾಡಿ ಕೊಟ್ಟಿದ್ದಾರೆ. ಮಹಿಳೆ ಮತ್ತು ಮಕ್ಕಳ ಸಬಲೀಕರಣ, ಉದ್ಯೋಗ ಮೇಳ, ಬಡವರಿಗೆ ವೈದ್ಯಕೀಯ ನೆರವು, ಶಿಕ್ಷಣ, ವಸತಿ, ಕ್ರೀಡೆ, ಸಾಮಾಜಿಕ ಶಾಂತಿ ಹೀಗೆ ವೈಯಕ್ತಿಕ ನೆರವನ್ನು ನೀಡುತ್ತಾ ಬಂದಿರುತ್ತಾರೆ. ಒಂದೆಡೆ ಅದ್ಭುತ ಜನನಾಯಕನಾಗಿ, ಮತ್ತೊಂದೆಡೆ ಅತ್ಯುತ್ತಮ ಆಡಳಿತಗಾರನಾಗಿ, ಮಗದೊಂದೆಡೆ ಎತ್ತರದ ಸಂಘಟಕನಾಗಿ ಮೊಯ್ದಿನ್ ಬಾವ ಅವರು ಎಲ್ಲರ ಗಮನ ಸೆಲೆದಿದ್ದಾರೆ. ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡದೆ, ನಿರಂತರ ಜನಸೇವೆ ಮಾಡಿಕೊಂಡು ಎಲ್ಲರೊಂದಿಗೂ ನಗು ಮೊಗದೊಂದಿಗೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ದಿನನಿತ್ಯ ಹೇರುತ್ತಿರುವ ಪೆಟ್ರೋಲ್ ಹಾಗು ಡೀಸೆಲ್ ಬೆಲೆಯನ್ನು ಪ್ರತಿಭಟಿಸಿ ಸೈಕಲ್ ನಲ್ಲೇ ಬಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದರು.

ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಅತ್ಯಧಿಕ ಬಹುಮತದೊಂದಿಗೆ ಗೆದ್ದು ಬರಲಿ ಎಂದು ಹಾರೈಸುವುದಾಗಿ ಗುರುಪುರ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸುರಲ್ಪಾಡಿ ಅಬ್ದುಲ್ ಮಜೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News