ವಾಜೂಬಾಯಿ ವಾಲಾ ಅಸಂವಿಧಾನಿಕವಾಗಿ ವರ್ತಿಸಿದ್ದಾರೆಂದು ಸುಪ್ರೀಂ ತೀರ್ಪಿನಿಂದ ಸಾಬೀತಾಗಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಮೇ 18: ಬಹುಮತ ಸಾಬೀತುಪಡಿಸುವಂತೆ ಬಿ.ಎಸ್. ಯಡಿಯೂರಪ್ಪ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿರುವುದು ರಾಜ್ಯಪಾಲ ವಾಜೂಬಾಯಿ ವಾಲಾ ಅಸಂವಿಧಾನಿಕವಾಗಿ ವರ್ತಿಸಿದ್ದಾರೆ ಎಂಬ ನಮ್ಮ ವಾದದ ಸಮರ್ಥನೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸಂಖ್ಯಾಬಲವಿಲ್ಲದೆಯೂ ಸರಕಾರ ರಚಿಸುತ್ತೇವೆ ಎಂದು ಬಿಜೆಪಿ ಹೇಳುತ್ತಿರುವ ಸುಳ್ಳಿಗೆ ನ್ಯಾಯಾಲಯ ಸರಿಯಾದ ಶಾಸ್ತಿ ಮಾಡಿದೆ. ಕಾನೂನಾತ್ಮಕವಾಗಿ ತಡೆಯಲಾಗಿರುವ ಕಾರಣ ಈಗ ಅವರು ಹಣ ಮತ್ತು ತೋಳ್ಬಲವನ್ನು ಬಳಸಿ ಬಹುಮತವನ್ನು ಕಳವು ಮಾಡಲು ಯತ್ನಿಸುತ್ತಾರೆ ಎಂದು ರಾಹುಲ್ ಗಾಂಧಿ ಶುಕ್ರವಾರ ಸರ್ವೋಚ್ಚ ನ್ಯಾಯಾಲಯದ ದೇಶದ ನಂತರ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ರಾಜ್ಯಪಾಲ ವಾಜೂಬಾಯಿ ವಾಲಾ ಬಿಜೆಪಿ ಸರಕಾರ ರಚಿಸಲು ಅವಕಾಶ ನೀಡುವ ಮೂಲಕ ಗುರುವಾರ ಬಿ.ಎಸ್ ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸರಕಾರಕ್ಕೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಹದಿನೈದು ದಿನಗಳ ಕಾಲಾವಕಾಶ ನೀಡಿದ್ದರು. ಶುಕ್ರವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ನಡೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಶನಿವಾರವೇ ವಿಶ್ವಾಸಮಾತ ಸಾಬೀತುಪಡಿಸುವಂತೆ ನೂತನ ಸರಕಾರಕ್ಕೆ ಸೂಚನೆ ನೀಡಿದೆ.