ಕಾಂಗ್ರೆಸ್ ಪ್ರಚೋದಿತ ಉಗ್ರಗಾಮಿಗಳ ಆಕ್ರಮಣ ಆರಂಭ: ಪ್ರಭಾಕರ ಭಟ್ ಕಲ್ಲಡ್ಕ

Update: 2018-05-20 12:18 GMT

ಪುತ್ತೂರು, ಮೇ 20: ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನಿರ್ಗಮನವಾದ ಬೆನ್ನಲ್ಲೇ ರಾತೋರಾತ್ರಿ ಹಿಂದೂಗಳ ಮೇಲೆ ಕಾಂಗ್ರೆಸ್ ಪ್ರಚೋದಿತ ಉಗ್ರಗಾಮಿಗಳಿಂದ ಆಕ್ರಮಣ ಆರಂಭವಾಗಿದೆ. ವಿಟ್ಲ ಪರಿಸರದಲ್ಲಿ ಹಿಂದೂಗಳ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಭಯದ ವಾತಾವರಣ ಸೃಷ್ಠಿಸಲಾಗಿದೆ. ಕಾಂಗ್ರೆಸ್ ಪ್ರೇರಿತ ಮತೀಯವಾದಿಗಳು ಯೋಜನಾಬದ್ಧವಾಗಿ ಇಂತಹ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆರೆಸೆಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಅವರು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಿಜೆಪಿ ಕಾರ್ಯಕರ್ತರನ್ನು ರವಿವಾರ ಭೇಟಿ ಮಾಡಿ, ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ಹಿಂದೂ ಸಮಾಜ ಎದ್ದು ನಿಂತು ಉತ್ತರಿಸಿದರೆ ಹಿಂದೂ ಸಮಾಜವನ್ನು ಎದುರಿಸುವ ಶಕ್ತಿ ಯಾರಿಗೂ ಇಲ್ಲ ಎಂಬುದನ್ನು ಈ ಮತೀಯವಾದಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪ್ರಭು ಶ್ರೀ ರಾಮಚಂದ್ರನ ವಿರುದ್ಧವೂ ಘೋಷಣೆ ಕೂಗುವ ಮೂಲಕ ವಿಟ್ಲ ಪರಿಸರದಲ್ಲಿ ದಾಂಧಲೆ ನಡೆಸಿದ ದುಷ್ಕರ್ಮಿಗಳು ತಾವು ದೇಶದ್ರೋಹಿಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ವಿಟ್ಲದ ಕುಡ್ತಮುಗೇರು, ಮಂಗಿಲಪದವಿನಲ್ಲಿ ಶನಿವಾರ ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಅವರು ಆಗ್ರಹಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News