ಮಂಗಳೂರಿಗರನ್ನು ಒಂದಾಗಿಸಿದ ಮಳೆರಾಯ!: ದೇವಸ್ಥಾನಕ್ಕೆ ನುಗ್ಗಿದ್ದ ನೀರನ್ನು ಹೊರಹಾಕಲು ನೆರವಾದ ಮುಸ್ಲಿಮರು
Update: 2018-05-30 09:01 GMT
ಮಂಗಳೂರು, ಮೇ 30: ಇತ್ತೀಚಿನ ದಿನಗಳಲ್ಲಿ ಕೋಮುಗಳ ನಡುವಿನ ಸಂಘರ್ಷ, ದ್ವೇಷದ ವಾತಾವರಣದ ಕಳಂಕ ಹೊತ್ತಿರುವ ಮಂಗಳೂರು ನಿನ್ನೆ ಸುರಿದ ಧಾರಾಕಾರ ಮಳೆಗೆ ಕಳಂಕವನ್ನೆಲ್ಲಾ ತೊಳೆದು ಶುಭ್ರವಾದಂತಾಗಿದೆ. ಮಳೆರಾಯನ ಆರ್ಭಟದಿಂದ ಜನರು ಸಂಕಷ್ಟಕ್ಕೀಡಾಗಿ ಆಡಳಿತ ವೈಫಲ್ಯದ ಬಗ್ಗೆ ಹಿಡಿಶಾಪ ಹಾಕಿದರೂ ಧರ್ಮ ಬೇಧ ಮರೆತು ಜನರು ಒಂದಾಗಿ ಪರಸ್ಪರ ನೆರವಾಗಿದ್ದಾರೆ.
ಮಂಗಳವಾರ ಸುರಿದ ಮಳೆಯಿಂದ ಪಾಂಡೇಶ್ವರದ ಶಿವನಗರ ಸಮೀಪದ ದೇವಸ್ಥಾನವೊಂದಕ್ಕೆ ನೀರು ನುಗ್ಗಿತ್ತು. ದೇವಸ್ಥಾನದೊಳಕ್ಕೆ ನುಗ್ಗಿದ ನೀರನ್ನು ಹೊರಹಾಕಲು ಹಿಂದೂಗಳ ಜೊತೆ ಮುಸ್ಲಿಮರೂ ಕೈಜೋಡಿಸಿದರು. ಈ ಸೌಹಾರ್ದ ನಡೆಯ ವಿಡಿಯೋ ಹಾಗು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ರಾಜಕೀಯಕ್ಕಾಗಿ ಹೊಡೆದಾಡಿ ದೂರವಾಗುವ ಜನರನ್ನು ಪ್ರಕೃತಿ ವಿಕೋಪಗಳು ಒಂದುಗೂಡಿಸುತ್ತವೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಅಭಿಪ್ರಾಯಿಸುತ್ತಿದ್ದಾರೆ.