ಪಂಚಾಯತ್ ಕಚೇರಿ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮುನ್ನೂರು ಗ್ರಾಪಂ ಪಿಡಿಒ
ಉಳ್ಳಾಲ, ಜೂ.13: ಪಂಚಾಯತ್ ಪಿಡಿಒವೊಬ್ಬರು ಗ್ರಾಪಂ ಕಚೇರಿಯ ಶೌಚಾಲಯದಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿಂದು ನಡೆದಿದೆ.
ಮುನ್ನೂರು ಗ್ರಾಪಂ ಪಿಡಿಒ ಕೃಷ್ಣಸ್ವಾಮಿ(47) ಮೃತಪಟ್ಟವರು. ಮೂಲತಃ ಧರ್ಮಸ್ಥಳ ನಿವಾಸಿಯಾಗಿದ್ದ ಇವರು ಶಿವರಾಮ ಬಿ.ಎಸ್. ಎಂಬವರ ಪುತ್ರ.
ಕೃಷ್ಣಸ್ವಾಮಿ ಡೆತ್ ನೋಟ್ ಬರೆದಿಟ್ಟು ತೊಕ್ಕೊಟ್ಟು ಬಳಿಯ ಕುತ್ತಾರ್ ಪದವಿನಲ್ಲಿರುವ ಮುನ್ನೂರು ಗ್ರಾಮ ಪಂಚಾಯತ್ ಕಚೇರಿಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಪರೀತ ಮದ್ಯಪಾನದ ಚಟ ಹೊಂದಿದ್ದ ಕೃಷ್ಣಸ್ವಾಮಿ ಮಾನಸಿಕವಾಗಿ ಕುಗ್ಗಿದ್ದರೆನ್ನಲಾಗಿದೆ. ಇವರು ಆತ್ಮಹತ್ಯೆಗೆ ಮುನ್ನ ಪತ್ರವೊಂದನ್ನು ಬರೆದಿಟ್ಟಿದ್ದು, ನನ್ನ ಸಾವಿಗೆ ನಾನೇ ಕಾರಣವಾಗಿದ್ದು, ಅನುಕಂಪದ ಆಧಾರದಲ್ಲಿನನ್ನ ಕೆಲಸವನ್ನು ಪತ್ನಿಗೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.