ಪಾಲಕ್ಕಾಡ್ ರೈಲ್ವೇ ಕೋಚ್ ಫ್ಯಾಕ್ಟರಿ ಯೋಜನೆ ಕೈಬಿಡುವ ಕೇಂದ್ರದ ನಿರ್ಧಾರಕ್ಕೆ ವಿರೋಧ
ಹೊಸದಿಲ್ಲಿ, ಜೂ.22: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ಆರಂಭಿಸುವ ಪ್ರಸ್ತಾವನೆಯನ್ನು ಕೈಬಿಟ್ಟಿರುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ರಾಜ್ಯದ ಎಡಪಕ್ಷದ ಸಂಸದರು ಹೊಸದಿಲ್ಲಿಯ ರೈಲ್ವೇ ಭವನದೆದುರು ಪ್ರತಿಭಟನೆ ನಡೆಸಿದರು.
ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗದ ಆಡಳಿತ ಇರುವ ಕಾರಣ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರಕಾರ ಕೇರಳದ ಜನತೆಗೆ ಶಿಕ್ಷೆ ನೀಡುತ್ತಿದೆ ಎಂದು ಪಿಣರಾಯಿ ವಿಜಯನ್ ದೂರಿದರು.
ಈಗ ಕೇರಳದಲ್ಲಿ ಬಳಕೆಯಲ್ಲಿರುವ ರೈಲ್ವೇ ಕೋಚ್ಗಳು ತುಕ್ಕು ಹಿಡಿದಿದ್ದು ಜರ್ಝರಿತವಾಗಿವೆ. ಆದರೆ ಕೇರಳದಲ್ಲಿ ಕೋಚ್ ಫ್ಯಾಕ್ಟರಿಯ ಅಗತ್ಯವಿಲ್ಲ ಎಂದು ನಿರ್ಧರಿಸಿರುವ ಕೇಂದ್ರ ಸರಕಾರ ಹರ್ಯಾಣದಲ್ಲಿ ಸ್ಥಾಪಿಸಲು ಮುಂದಾಗಿದೆ. ಅಲ್ಲದೆ ಉತ್ತರಪ್ರದೇಶದಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ಆರಂಭಿಸಲು ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು ಎಂದು ಇತ್ತೀಚೆಗೆ ಕೇಂದ್ರದ ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದರು. ಹರ್ಯಾಣದಲ್ಲಿ ಮತ್ತು ಉ.ಪ್ರದೇಶದಲ್ಲಿ ಹೊಸ ಕೋಚ್ ಫ್ಯಾಕ್ಟರಿ ಆರಂಭಿಸಲು ಸಾಧ್ಯವಿದೆ. ಆದರೆ ಕೇರಳದಲ್ಲಿ ಮಾತ್ರ ಆಗದು ಎನ್ನುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ತಾರತಮ್ಯ ಏಕೆ. ಗಣರಾಜ್ಯ ವ್ಯವಸ್ಥೆಗೆ ಇದು ಒಗ್ಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರಕಾರ ಪ್ರಜಾಸತ್ತಾತ್ಮಕ ನಡವಳಿಕೆಯನ್ನು ಒಪ್ಪುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದರು.
ಕೇಂದ್ರ ಸರಕಾರ ಕೇರಳವನ್ನು ಶತ್ರು ಎಂದು ಪರಿಗಣಿಸಿದೆಯೇ, ಕೇರಳದ ವಿಷಯದಲ್ಲಿ ಬಿಜೆಪಿ ಮತ್ತು ಆ ಪಕ್ಷದ ನಾಯಕರು ಶತೃತ್ವದ ಭಾವನೆಯಲ್ಲಿ ವ್ಯವಹರಿಸುವುದು ಸರಿಯೇ ಎಂದು ಪ್ರಶ್ನಿಸಿದ ವಿಜಯನ್, ಇದು ಕೇವಲ ಪಾಲಕ್ಕಾಡ್ ಅಥವಾ ಕೇರಳಕ್ಕೆ ಸಂಬಂಧಿಸಿದ ವಿಷಯವಲ್ಲ. ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದೆ. ಕೇಂದ್ರ ಸರಕಾರವು ರಾಜ್ಯ ಸರಕಾರಗಳೊಡನೆ ಯಾವ ರೀತಿ ವ್ಯವಹರಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಈ ವಿಷಯದಲ್ಲಿ ರೈಲ್ವೇ ಸಚಿವ ಗೋಯಲ್ ಮತ್ತು ಪ್ರಧಾನಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಪಾಲಕ್ಕಾಡ್ನಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ಆರಂಭಿಸುವ ಬಗ್ಗೆ 1982ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಭರವಸೆ ನೀಡಿದ್ದರು. ಇದೀಗ 36 ವರ್ಷ ಕಳೆದರೂ ಈ ಭರವಸೆ ಈಡೇರಲಿಲ್ಲ ಎಂಬುದನ್ನು ನೆನಪಿಸಲು ನಾವು ಇಲ್ಲಿ ಒಟ್ಟು ಸೇರಿದ್ದೇವೆ ಎಂದು ವಿಜಯನ್ ತಿಳಿಸಿದರು. ಪಾಲಕ್ಕಾಡ್ ಸಂಸದ ಎಂ.ಬಿ.ರಾಜೇಶ್, ಇಡುಕ್ಕಿ ಸಂಸದರಾದ ಜಾಯ್ಸಿ ಜಾರ್ಜ್, ಪಯ್ಯನೂರು ಸಂಸದ ಪಿ.ಕೆ.ಶ್ರೀಮತಿ, ರಾಜ್ಯಸಭಾ ಸಂಸದರಾದ ಎಳಮಾರಂ ಕರೀಂ ಮತ್ತು ಕೆ.ಕೆ.ರಾಗೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಇದಕ್ಕೂ ಮೊದಲು ರಾಜ್ಯ ವಿಧಾನಸಭೆಯಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದ ಕೇರಳದ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಕೇಂದ್ರ ಸರಕಾರದ ಬಗ್ಗೆ ಟೀಕಾಪ್ರಹಾರ ನಡೆಸಿದ್ದರು. ಉತ್ತರಪ್ರದೇಶದ ರಾಯ್ಬರೇಲಿಯಲ್ಲಿ ಕೋಚ್ ಫ್ಯಾಕ್ಟರಿ ಈಗಾಗಲೇ ನಿಯೋಜಿತವಾಗಿದೆ. ಇದೇ ರೀತಿಯ ಫ್ಯಾಕ್ಟರಿಯನ್ನು ಚೆನ್ನೈಯಲ್ಲಿ ಆರಂಭಿಸುವ ಪ್ರಸ್ತಾವನೆಯನ್ನು ಪರಿಗಣಿಸಲಾಗಿದೆ. ಆದರೆ ಕೇರಳಕ್ಕೆ ಮಾತ್ರ ಅನ್ಯಾಯ ಎಸಗಲಾಗಿದೆ ಎಂದು ದೂರಿದ್ದರು. 2008-09ರ ಕೇಂದ್ರ ಬಜೆಟ್ನಲ್ಲಿ ಪಾಲಕ್ಕಾಡ್ನಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ಆರಂಭಿಸುವ ಘೋಷಣೆ ಮಾಡಲಾಗಿತ್ತು ಹಾಗೂ ಕಳೆದ ವರ್ಷ ಇದಕ್ಕಾಗಿ 240 ಎಕರೆ ಭೂಮಿಯನ್ನು ಕೇರಳ ಸರಕಾರ ಸ್ವಾಧೀನಪಡಿಸಿಕೊಂಡಿತ್ತು.