ಕಡಬ: ಕಾರಿನ ಮೇಲೆ ಕಾಡಾನೆ ದಾಳಿ; ಓರ್ವನಿಗೆ ಗಂಭೀರ ಗಾಯ

Update: 2018-06-23 05:20 GMT

ಕಡಬ, ಜೂ.23: ಪ್ರಯಾಣಿಕರಿದ್ದ ಕಾರೊಂದರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಓರ್ವ ಗಂಭೀರ ಗಾಯಗೊಂಡು, ಆರು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಚಿಕ್ಕಮಗಳೂರಿನ ಗಿರೀಶ್ ಎಂಬವರು ಎಂಟು ಮಂದಿ ಕುಟುಂಬಸ್ಥರ ಸಮೇತ ಓಮ್ನಿ ಕಾರಿನಲ್ಲಿ ದೇವಳಗಳಿಗೆ ಪ್ರವಾಸ ಹೊರಟಿದ್ದರು. ಅವರು ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಇವರಿದ್ದ ಮಾರುತಿ ಓಮ್ನಿ ಕಾರು ಬಿಳಿನೆಲೆ ಸಿ.ಪಿ.ಸಿ.ಆರ್.ಐ. ಸಮೀಪ ತಲುಪಿದಾಗ ಕಾಡಾನೆಯೊಂದು ರಸ್ತೆಯನ್ನು ಹಾದುಹೋಗುತ್ತಿತ್ತು. ಇದನ್ನು ಕಂಡ ಚಾಲಕ ಆನೆಯ ಸಮೀಪದಲ್ಲೇ ಕಾರನ್ನು ನಿಲ್ಲಿಸಿದ್ದರು. ಈ ಸಂದರ್ಭ ಕಾಡಾನೆಯು ಕಾರಿನ ಮೇಲೆ ಹಠಾತ್ ದಾಳಿ ನಡೆಸಿದೆ. ಅಷ್ಟರಲ್ಲಿ ಬಸ್ಸೊಂದು ಜೋರಾಗಿ ಹಾರ್ನ್ ಬಾರಿಸುತ್ತಾ ಬಂದ ಕಾರಣ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಕಾಡಾನೆ ದಾಳಿಗೆ ಸಿಲುಕಿದ ಕಾರಿನಲ್ಲಿದ್ದ ಓರ್ವ ಗಂಭೀರ ಗಾಯಗೊಂಡಿದ್ದರೆ, ಇನ್ನುಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News