ಅಮಲು ಪದಾರ್ಥ ಅತಿಯಾಗಿ ಕಥುವಾ ಸಂತ್ರಸ್ತೆ ಕೋಮಾಕ್ಕೆ ಜಾರಿದ್ದಳು: ವಿಧಿವಿಜ್ಞಾನ ತಜ್ಞರು

Update: 2018-06-24 16:30 GMT

ಹೊಸದಿಲ್ಲಿ, ಜೂ.24: ಈ ವರ್ಷ ಜನವರಿಯಲ್ಲಿ ಅಪಹರಿಸಲ್ಪಟ್ಟು ನಂತರ ಅತ್ಯಾಚಾರ ನಡೆಸಿ ಹತ್ಯೆಗೈಯ್ಯಲಾದ ಕಥುವಾದ ಎಂಟರ ಹರೆಯದ ಬಾಲಕಿಗೆ ಒತ್ತಾಯಪೂರ್ವಕವಾಗಿ ನೀಡಲಾದ ಅಮಲು ಬರಿಸುವ ಪದಾರ್ಥದಿಂದಾಗಿ ಆಕೆ ಹತ್ಯೆಗೂ ಮುನ್ನ ಕೋಮಕ್ಕೆ ಜಾರಿರಬಹುದು ಎಂದು ವಿಧಿವಿಜ್ಞಾನ ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ಬಾಲಕಿಯನ್ನು ವಶದಲ್ಲಿಸಿದ್ದ ಸಮಯದಲ್ಲಿ ಆರೋಪಿಗಳು ಆಕೆಗೆ ನೀಡಿದ್ದ ಸ್ಥಳೀಯವಾಗಿ ದೊರಕುವ ಮನ್ನರ್ ಎಂಬ ಅಮಲು ಪದಾರ್ಥ ಹಾಗೂ ಎಪಿಟ್ರಿಲ್ 0.5 ಎಂ.ಜಿ ಮಾತ್ರೆಗಳು ಆಕೆಯ ಮೇಲೆ ಉಂಟು ಮಾಡಿದ್ದ ಪರಿಣಾಮವನ್ನು ತಿಳಿಯುವ ಸಲುವಾಗಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಕ್ರೈ ಬ್ರಾಂಚ್ ವಿಭಾಗ ಸಂತ್ರಸ್ತೆಯ ಅಂತಃಸ್ರವವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಈ ತಿಂಗಳ ಆರಂಭದಲ್ಲಿ ಕಳುಹಿಸಿತ್ತು. ಎಂಟು ವರ್ಷದ ಬಾಲಕಿಗೆ ಈ ಅಮಲು ಪದಾರ್ಥಗಳನ್ನು ಖಾಲಿ ಹೊಟ್ಟೆಗೆ ನೀಡಿದರೆ ಏನಾಗಬಹುದು ಎಂಬುದನ್ನು ತಿಳಿಸುವಂತೆ ಕ್ರೈಂ ಬ್ರಾಂಚ್ ಅಧಿಕಾರಿಗಳು ವೈದ್ಯಕೀಯ ತಜ್ಞರಿಗೆ ಮನವಿ ಮಾಡಿದ್ದರು. ಬಾಲಕಿಯ ಮೇಲೆ ಈ ರೀತಿಯ ಭೀಕರ ದಾಳಿ ನಡೆಯುತ್ತಿದ್ದಾಗ ಆಕೆ ಬೊಬ್ಬೆ ಹಾಕದಿರಲು ಸಾಧ್ಯವೇ ಇಲ್ಲ ಎಂದು ಪ್ರಕರಣದ ಆರೋಪಿಗಳು, ಅವರ ಪರ ವಕೀಲರು ಹಾಗೂ ಸಾಮಾಜಿಕ ಜಾಲತಾಣದಲ್ಲಿನ ಬೆಂಬಲಿಗರು ವಾದಿಸಿದ ಹಿನ್ನೆಲೆಯಲ್ಲಿ ಕ್ರೈ ಬ್ರಾಂಚ್ ಪೊಲೀಸರು ಈ ಪ್ರಕರಣದಲ್ಲಿ ಹೆಚ್ಚಿನ ವೈದ್ಯಕೀಯ ನೆರವನ್ನು ಪಡೆದುಕೊಳ್ಳಲು ನಿರ್ಧರಿಸಿದರು.

ಮೃತ ಬಾಲಕಿಯ ಅಂತಃಸ್ರಾವವನ್ನು ಪರೀಕ್ಷಿಸಿದ ವೈದ್ಯರು, ಆಕೆಗೆ ನೀಡಲಾಗಿರುವ ಅಮಲು ಪದಾರ್ಥದಲ್ಲಿ ಕ್ಲೊನಝೆಪಮ್ ಎಂಬ ಉಪ್ಪಿನಂಶವಿದ್ದು ಅದನ್ನು ವೈದ್ಯರ ಮಾರ್ಗದರ್ಶನದಲ್ಲೇ ನೀಡಬೇಕು ಎಂದು ತಿಳಿಸಿದ್ದಾರೆ. ಜನವರಿ 11ರಂದು ಬಾಲಕಿಗೆ ಐದು ಕ್ಲೊನಝೆಪಮ್ ಗುಳಿಗೆಗಳನ್ನು ನೀಡಲಾಗಿತ್ತು. ನಂತರ ಆಕೆಗೆ ಇದರ ಹಲವು ಮಾತ್ರೆಗಳನ್ನು ನೀಡಲಾಗಿತ್ತು. ಇದರಿಂದಾಗಿ ಆಕೆ ಕೋಮಾಕ್ಕೆ ಜಾರಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಅಭಿಪ್ರಾಯವನ್ನು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಜಾಬ್‌ನ ಪಠಾಣ್‌ಕೋಟ್‌ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಈ ಪ್ರಕರಣದ ಮುಂದಿನ ವಿಚಾರಣೆಯು ಮುಂದಿನ ವಾರ ನ್ಯಾಯಾಲಯದ ಬೇಸಿಗೆ ರಜೆಯ ನಂತರ ಆರಂಭವಾಗಲಿದೆ. ಅಲೆಮಾರಿ ಸಮುದಾಯಕ್ಕೆ ಸೇರಿದ್ದ ಎಂಟರ ಹರೆಯದ ಬಾಲಕಿಯನ್ನು ಜನವರಿ 10ರಂದು ಅಪಹರಣ ಮಾಡಿ ಆಕೆಯ ಅತ್ಯಾಚಾರ ನಡೆಸಿ ಜನವರಿ 14ರಂದು ಹತ್ಯೆ ಮಾಡಲಾಗಿತ್ತು. ಆಕೆಯ ಮೃತದೇಹ ಜನವರಿ 17ರಂದು ಪತ್ತೆಯಗಿತ್ತು. ಸದ್ಯ ಪ್ರಕರಣದಲ್ಲಿ ಪೊಲೀಸರು ಎಂಟು ಮಂದಿಯನ್ನು ಆರೋಪಿಗಳೆಂದು ಗುರುತಿಸಿದ್ದಾರೆ. ಈ ಪೈಕಿ ಎಂಟನೇ ಆರೋಪಿ ಅಪ್ರಾಪ್ತನಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News