ಮಂಗಳೂರು: ಪೊಲೀಸ್ ಸಿಬ್ಬಂದಿಯ ಪುತ್ರ ಆತ್ಮಹತ್ಯೆ

Update: 2018-06-25 18:44 GMT

ಮಂಗಳೂರು, ಜೂ. 25: ನಗರದ ಬಲ್ಮಠದಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಸಹಾಯಕ ಅಡಿಟರ್ ಆಗಿದ್ದ ಅಂಕಿತ್ ರಾಣೆ (27) ಕಚೇರಿಯ ಸ್ಟೋರ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಅಂಕಿತ್ ರಾಣೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ಸಬ್ ಇನ್‌ಸ್ಪೆಕ್ಟರ್ ಪದ್ಮಯ್ಯ ರಾಣೆ ಅವರ ಪುತ್ರರಾಗಿದ್ದರು ಎಂದು ಗುರುತಿಸಲಾಗಿದೆ.

ಪದ್ಮಯ್ಯ ರಾಣೆ ಕುಟುಂಬ ಬಿಕರ್ನಕಟ್ಟೆಯ ಕಂಡೆಟ್ಟುವಿನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಅಂಕಿತ್ ಕಳೆದ 5 ವರ್ಷಗಳಿಂದ ಬಲ್ಮಠದ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

ಶನಿವಾರ ಮಧ್ಯಾಹ್ನ ಕಚೇರಿಯಿಂದ ಮನೆಗೆ ತೆರಳಿದ್ದ ಅವರು ಸೋಮವಾರ ಬೆಳಗ್ಗಿನ ತನಕ ಮನೆಯಲ್ಲಿಯೇ ಇದ್ದರು. ಸೋಮವಾರ ತನಗೆ ಕೆಲಸ ಇದೆ ಎಂದು ಹೇಳಿ ಮನೆಯಿಂದ 7.45 ಕ್ಕೆ ಹೊರಟು ಬಂದಿದ್ದರು. ಹಾಗೆ ಬಂದವರು ಕಚೇರಿಯ ವಾಚ್‌ಮನ್ ಕೈಯಿಂದ ಸ್ಟೋರ್ ರೂಂ ಕೀ ಪಡೆದು ಸ್ಟೋರ್ ರೂಂ ಬಾಗಿಲು ತೆರೆದು ಒಳಗೆ ಹೋಗಿ ಬಾಗಿಲು ಮುಚ್ಚಿ ಮನೆಯಿಂದ ಬರುವಾಗಲೇ ತಂದಿದ್ದ ಸೀರೆಯನ್ನು ಉಪಯೋಗಿಸಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಟೋರ್ ರೂಂಗೆ ಹೋದವರು ಬಹಳಷ್ಟು ಹೊತ್ತಾದರೂ ಹೊರಗೆ ಬಾರದಿರುವುದರಿಂದ ಸಂಶಯಗೊಂಡು ಕಚೇರಿಯ ಸಿಬ್ಬಂದಿ ಬಾಗಿಲಿನ ಸಂದಿನಿಂದ ಒಳಗೆ ಇಣುಕಿ ನೋಡಿದ್ದಾರೆ. ಆಗ ಅಂಕಿತ್ ರಾಣೆ ಫ್ಯಾನಿಗೆ ನೇತಾಡುತ್ತಿರುವುದು ಕಂಡು ಬಂದಿದೆ. ಕದ್ರಿ ಪೊಲೀಸರು ಸುದ್ದಿ ತಿಳಿದು ಸ್ಥಳಕ್ಕೆ ತೆರಳಿ ಸ್ಟೋರ್ ರೂಂ ಬಾಗಿಲು ಒಡೆದು ಒಳ ಪ್ರವೇಶಿಸಿದರು. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಪದ್ಮಯ್ಯ ದಂಪತಿಯ ಇಬ್ಬರು ಮಕ್ಕಳಲ್ಲಿ ಅಂಕಿತ್ ಹಿರಿಯವನಾಗಿದ್ದ. ಪುತ್ರಿ ಮೆಡಿಕಲ್ ಓದುತ್ತಿದ್ದಾರೆ. ಪದ್ಮಯ್ಯ ಅವರ ಸ್ವಂತ ಊರು ವೇಣೂರು ಆಗಿದ್ದು, 2 ವರ್ಷಗಳ ಹಿಂದೆ ಶಿವಮೊಗ್ಗದಿಂದ ವರ್ಗವಾಗಿ ಮಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News