ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ತಾಳ್ಮೆ ವಹಿಸಿ: ಹಿಂದೂ ಸಂತರಿಗೆ ಆದಿತ್ಯನಾಥ್ ಮನವಿ
Update: 2018-06-25 16:30 GMT
ಲಕ್ನೋ, ಜೂ.25: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ತಾಳ್ಮೆ ವಹಿಸಬೇಕು ಎಂದು ಹಿಂದೂ ಸಂತರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿನಂತಿಸಿದ್ದಾರೆ.
ಅಯೋಧ್ಯೆಯಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ಮಾತನಾಡಿದ ಅವರು, "ನಾವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನ್ಯಾಯಾಂಗ, ಕಾರ್ಯಾಂಗ ಹಾಗು ಶಾಸಕಾಂಗಕ್ಕೆ ಅದರದ್ದೇ ಆದ ಪಾತ್ರಗಳಿವೆ. ಇವುಗಳೆನ್ನೆಲ್ಲಾ ನಾವು ಗಮನದಲ್ಲಿರಿಸಬೇಕು" ಎಂದವರು ಹೇಳಿದರು.
"ಮರ್ಯಾದಾ ಪುರುಷೋತ್ತಮ ರಾಮನ ದಯೆ ಇರುವಾಗ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ.... ಆದರೆ ಸಂತರಲ್ಲಿ ಈ ಬಗ್ಗೆ ಸಂಶಯ ಯಾಕೆ? ನೀವು ಇದುವರೆಗೂ ತಾಳ್ಮೆಯಿಂದಿದ್ದೀರಿ. ಕೆಲ ಕಾಲದವರೆಗೂ ಇದೇ ತಾಳ್ಮೆಯನ್ನು ನೀವು ಮುಂದುವರಿಸಬೇಕು ಎಂದು ನನಗನಿಸುತ್ತದೆ" ಎಂದವರು ಹೇಳಿದರು.