ವಿದೇಶದಿಂದ ಆಗಮಿಸುವ ಮಗಳನ್ನು ಬರಮಾಡಿಕೊಳ್ಳಲು ಮಂಗಳೂರಿಗೆ ಬರುತ್ತಿದ್ದ ಕಾರು ಅಪಘಾತ: ತಂದೆ ಮೃತ್ಯು

Update: 2018-07-03 04:20 GMT

ಕಾಸರಗೋಡು, ಜು.3: ಸರಕಾರಿ ಬಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಕಾಸರಗೋಡು -ಕಾಞಂಗಾಡ್ ರಾಜ್ಯ ಹೆದ್ದಾರಿಯ ಉದುಮ ಪಳ್ಳಂ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ಎನ್.ಕೆ.ಅಬ್ದುಲ್ ಹಮೀದ್ ಹಾಜಿ(72) ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ವಳಿಯಪರಂಬದ ಝುಲ್ಫಿಕರ್‌ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಮೀದ್ ಹಾಜಿಯವರ ಪುತ್ರಿ ದುಬೈಯಿಂದ ಊರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಕೆಯನ್ನು ಬರಮಾಡಿಕೊಳ್ಳಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಉದುಮ ಪಳ್ಳಂ ಟೆಲಿಫೋನ್ ಎಕ್ಸ್‌ಚೇಂಜ್ ಕೇಂದ್ರದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾಸರಗೋಡಿಗೆ ತೆರಳುತ್ತಿದ್ದ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ಅಪಘಾತ ನಡೆದ ಕೂಡಲೇ ಸ್ಥಳೀಯರು ಹಮೀದ್ ಹಾಜಿ ಹಾಗೂ ಝುಲ್ಫಿಕರ್ ಅವರನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಹಮೀದ್ ಹಾಜಿ ಅವರ ಜೀವ ಉಳಿಸಲಾಗಲಿಲ್ಲ .

ಅಬ್ದುಲ್ ಹಮೀದ್ ಹಾಜಿ ಮುಸ್ಲಿಮ್ ಲೀಗ್‌ನ ಪ್ರಾದೇಶಿಕ ಮುಖಂಡರಾಗಿದ್ದರು. ಘಟನೆಯ ಬಗ್ಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News