ನಿನ್ನ ಪ್ರೀತಿಯನ್ನು ನಿರೂಪಿಸು ಎಂದ ಯುವತಿಯ ತಂದೆ: ತನ್ನ ತಲೆಗೆ ಗುಂಡಿಕ್ಕಿದ ಬಿಜೆಪಿ ಮುಖಂಡ

Update: 2018-07-04 14:31 GMT

ಭೋಪಾಲ, ಜು.4: “ನಿನ್ನ ಪ್ರೀತಿಯನ್ನು ಪ್ರಮಾಣೀಕರಿಸು” ಎಂದು ಪ್ರಿಯತಮೆಯ ತಂದೆ ತಿಳಿಸಿದ್ದನ್ನು ಪಾಲಿಸಲು ಮುಂದಾದ ಬಿಜೆಪಿ ಯುವಮೋರ್ಛಾದ ನಾಯಕನೊಬ್ಬ ಸ್ವಯಂ ಗುಂಡು ಹಾರಿಸಿಕೊಂಡ ಘಟನೆ ಭೋಪಾಲದಲ್ಲಿ ಮಂಗಳವಾರ ನಡೆದಿದೆ.

ಅರೇರಾ ಮಂಡಲ ಬಿಜೆಪಿ ಯುವಮೋರ್ಛಾದ ಉಪಾಧ್ಯಕ್ಷ ಅತುಲ್ ಲೋಖಂಡೆ ಗುಂಡು ಹಾರಿಸಿಕೊಂಡಿರುವ ವ್ಯಕ್ತಿ. ಘಟನೆಯಲ್ಲಿ ಮೆದುಳು ನಿಷ್ಕ್ರಿಯಗೊಂಡಿರುವ ಅತುಲ್‌ನನ್ನು ಇದೀಗ ವೆಂಟಿಲೇಟರ್ ವ್ಯವಸ್ಥೆಯಡಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್ ಉದ್ಯೋಗಿಯಾಗಿದ್ದ ಮಹಿಳೆಯ ಜೊತೆಗೆ ಅತುಲ್ ಕಳೆದ 13 ವರ್ಷಗಳಿಂದ ಸಂಬಂಧ ಹೊಂದಿದ್ದ ಎನ್ನಲಾಗಿದೆ . ಆರಂಭದಲ್ಲಿ ಮಹಿಳೆಯ ತಂದೆ ಇವರಿಬ್ಬರ ಮದುವೆಗೆ ನಿರಾಕರಿಸಿದಾಗ ಅತುಲ್ ಬೆದರಿಕೆ ಒಡ್ಡಿದ್ದ . ಇದರಿಂದ ಅಸಮಾಧಾನಗೊಂಡ ಆ ಮಹಿಳೆ ಅತುಲ್‌ನಿಂದ ದೂರವಾಗಿದ್ದಳು ಎಂದು ಅತುಲ್‌ನ ಸ್ನೇಹಿತರು ತಿಳಿಸಿದ್ದಾರೆ. ಬಳಿಕ ತಾವಿಬ್ಬರು ಜೊತೆಗಿರುವ ಸುಮಾರು 40 ಫೋಟೋಗಳನ್ನು ಅತುಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಹಿಳೆಯ ತಂದೆ ತನಗೆ ತಿಳಿಸಿದ್ದು, ಒಂದು ವೇಳೆ ಬದುಕುಳಿದರೆ ನಿನಗೆ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ. “ಒಂದು ವೇಳೆ ಸತ್ತರೂ ಮುಂದಿನ ಜನ್ಮದಲ್ಲಿ ಇಬ್ಬರೂ ಒಂದುಗೂಡುತ್ತೀರಿ ಎಂದು ತಿಳಿಸಿದ್ದಾರೆ. ಪ್ರೀತಿಸಿದ ಹುಡುಗಿ ಸಿಗದಿದ್ದ ಮೇಲೆ ಬದುಕುಳಿದು ಪ್ರಯೋಜನವೇನು” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಅತುಲ್ ಪೋಸ್ಟ್ ಮಾಡಿರುವ ಬರಹದಲ್ಲಿ ತಿಳಿಸಲಾಗಿದೆ. ಮಂಗಳವಾರ ರಾತ್ರಿ ಸುಮಾರು 9:30ರ ವೇಳೆಗೆ ಮಹಿಳೆಯ ಮನೆಗೆ ತೆರಳಿದ್ದ ಅತುಲ್ ಅಲ್ಲಿ ದೇಶೀಯ ನಿರ್ಮಿತ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದು ಗಂಭೀರ ಗಾಯಗೊಂಡಿದ್ದಾನೆ. ಈ ವೇಳೆ ಮನೆಯ ಹೊರಗಡೆ ಕಾರಿನಲ್ಲಿದ್ದ ಅತುಲ್‌ನ ಮಾವ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಮಹಿಳೆಯ ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News