ವಿಭಿನ್ನ‌ಧರ್ಮೀಯ ಗೆಳತಿಯ ಮನೆಯಲ್ಲಿದ್ದ ಯುವತಿಯ ಮೇಲೆ ಅನೈತಿಕ ಪೊಲೀಸ್ ಗಿರಿಗೆ ಯತ್ನ: ಆರೋಪ

Update: 2018-07-11 18:39 GMT

ಬಂಟ್ವಾಳ, ಜು. 11: ವಿಭಿನ್ನ ಧರ್ಮೀಯ ಗೆಳತಿಯ ಸಂಬಂಧಿಕರ ಮನೆಗೆ ಹೋಗಿದ್ದ ಯುವತಿಯೊಬ್ಬಳ ಮೇಲೆ ಕಿಡಿಗೇಡಿಗಳು‌ ದಾಳಿ‌ ನಡೆಸಲು ಮುಂದಾಗಿದ್ದರು ಎಂದು ಆರೋಪಿಸಲಾಗಿದ್ದು, ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಡ್ಕ ಶ್ರೀರಾಮ ಹೈಸ್ಕೂಲ್ ಸಮೀಪ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಆಂಧ್ರ ಮೂಲದ ವಿಭಿನ್ನಧರ್ಮೀಯ ಇಬ್ಬರು ಗೆಳತಿಯರು ರಾತ್ರಿ ಬೆಂಗಳೂರಿಗೆ ಹೋಗಲಿರುವ ಕಾರಣ ಕಲ್ಲಡ್ಕಕ್ಕೆ ಬಂದಿದ್ದರು.‌ ಅಲ್ಲಿ ಯುವತಿಯೊಬ್ಬಳ ನೆಂಟರ ಮನೆಯಿದ್ದು, ಇಬ್ಬರೂ ಅಲ್ಲಿಗೆ ತೆರಳಿದ್ದರು. ಇದನ್ನು ಗಮನಿಸಿದ ಕಿಡಿಗೇಡಿಗಳು ಮನೆಗೆ ದಾಳಿ ನಡೆಸುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ತಕ್ಷಣ ಕಾರ್ಯಪ್ರವೃತರಾದ ಬಂಟ್ವಾಳ ಠಾಣಾ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ, ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ತದನಂತರ ಮೆಲ್ಕಾರ್ ಎಂಬಲ್ಲಿ ಭದ್ರತೆ ನೀಡಿ ಪ್ರತ್ಯೇಕವಾಗಿ ಬಸ್ ಹತ್ತಿಸಿ, ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಇವರಿಬ್ಬರು ಖಾಸಗಿ ಕಾಲೇಜೊಂದರ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದು, ಪರಸ್ಪರ ಸ್ನೇಹಿತರಾಗಿದ್ದಾರೆ. ಇವರಿಬ್ಬರಿಗೆ ಮುಂದಿನ ವಾರ ಬೆಂಗಳೂರಿನಲ್ಲಿ ಪರೀಕ್ಷೆ ಇತ್ತು ಎನ್ನಲಾಗಿದೆ.

ಇದೀಗ ಸುಮಾರು ನಾಲ್ಕು ವಾಹನಗಳಲ್ಲಿ ಪೊಲೀಸರು ಮನೆಗೆ ಧಾವಿಸಿ, ಮನೆಯವರಿಗೆ ಘಟನೆಯ ಬಗ್ಗೆ ಮನವರಿಕೆ ಮಾಡಿ, ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಘಟನೆಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News