ಪಿಲಿಕುಳದಲ್ಲಿ ಗಮನಸೆಳೆದ ಮತ್ಸ್ಯೋತ್ಸವ, ಕ್ಷೇತ್ರೋತ್ಸವ
ಮಂಗಳೂರು, ಜು.15: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಮತ್ತು ಮೀನುಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಪಿಲಿಕುಳ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವವು ಇಂದು ಪಿಲಿಕುಳ ನಿಸರ್ಗಧಾಮದ ಪಿಲಿಕುಳ ಲೇಕ್ ಗಾರ್ಡನ್ನಲ್ಲಿ ನಡೆಯಿತು.
ಮತ್ಸ್ಯೋತ್ಸವಕ್ಕೆ ಶಾಸಕ ಉಮನಾಥ ಕೋಟ್ಯಾನ್ ಚಾಲನೆ ನೀಡಿದರು.
ಮೇಳವು ಸದಾ ಕಡಲ ಮೀನುಗಳ ರುಚಿ ಸವಿಯುವವರಿಗೆ ನದಿ, ಹಳ್ಳದ ಮೀನುಗಳ ಸ್ವಾದವನ್ನು ಚಪ್ಪರಿಸುವಂತೆ ಮಾಡಿತು.
ಪಿಲಿಕುಳದ ಲೇಕ್ ಗಾರ್ಡನ್ನಲ್ಲಿ ಬಲೆ ಹಾಕಿ ಹಿಡಿದ ಮೀನುಗಳನ್ನು ಅಲ್ಲಿಯೆ ಮೀನುಪ್ರಿಯರಿಗೆ ಮಾರಾಟ ಮಾಡಲಾಯಿತು. ತಾಜಾ ಮೀನು ಕೊಳ್ಳುವ ಖುಷಿಯಲ್ಲಿ ಗ್ರಾಹಕರು ಮೀನು ಖರೀದಿಸಲು ಮುಗಿಬಿದ್ದರು.
ಲೇಕ್ ಗಾರ್ಡನ್ನಲ್ಲಿ ಕಾಟ್ಲ, ಮರಿ ಮುಗುಡು ಸೇರಿದಂತೆ ವಿವಿಧ ಮೀನುಗಳನ್ನು ಹಿಡಿದು ಗ್ರಾಹಕರಿಗೆ ಮಾರಾಟ ಮಾಡಲಾಯಿತು. ಇನ್ನು ಕೆಲವರು ಮೀನನ್ನು ಹಿಡಿದು ಅಲ್ಲಿಯೆ ಬೇಯಿಸಿ ತಿಂದು ಖುಷಿಪಟ್ಟರು. ಒಂದೆಡೆ ಮೀನುಗಳನ್ನು ಹಿಡಿದು ಖ್ಯಾದ ತಯಾರಿಸಿ ಮಾರಾಟ ನಡೆದರೆ ಮತ್ತೊಂದೆಡೆ ಅಲಂಕಾರಿಕ ಮೀನುಗಳ ಪ್ರದರ್ಶನವು ಗಮನಸೆಳೆದವು.