ಶಿರೂರು ಮಠಕ್ಕೆ ಉತ್ತರಾಧಿಕಾರಿ ಶೀಘ್ರ ಆಯ್ಕೆ: ಸೋದೆ ಸ್ವಾಮೀಜಿ
ಉಡುಪಿ, 19: ಶಿರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಆಗಬೇಕಾಗಿದ್ದು, ಶೀಘ್ರವೇ ಯೋಗ್ಯ ವಟುವನ್ನು ಉತ್ತರಾಧಿಕಾರಿಯ ನೇಮಕ ಮಾಡಲಾಗುವುದು ಎಂದು ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ಇಂದು ನಡೆದ ಶಿರೂರು ಸ್ವಾಮೀಜಿಯ ಅಂತ್ಯಕ್ರಿಯೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಉತ್ತರಾಧಿಕಾರಿಯ ನೇಮಕದ ಬಗ್ಗೆ ಹಿರಿಯ ಸ್ವಾಮೀಜಿಗಳ ಅಭಿಪ್ರಾಯ ಪಡೆಯಲಾಗುವುದು. ಶಿರೂರು ಸ್ವಾಮೀಜಿಗೆ ವಿಷ ಪ್ರಾಶನವಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ವೈದ್ಯಕೀಯ ಪರೀಕ್ಷೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಅವರು ಹೇಳಿದರು.
ಶಿರೂರು ಮಠದ ಎಲ್ಲಾ ಸೊತ್ತುಗಳು ಸ್ವಾಧೀನ ಆಗಬೇಕಾಗಿದೆ. ಸದ್ಯ ಈ ಎಲ್ಲಾ ಸೊತ್ತುಗಳು ತನಿಖೆ ಹಿನ್ನೆಲೆಯಲ್ಲಿ ಪೊಲೀಸರ ಸುಪರ್ದಿಯಲ್ಲಿದೆ. ಮುಂದೆ ಪೊಲೀಸರ ಮೂಲಕ ಕಾನೂನು ಪ್ರಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.