ಗೃಹ ರಕ್ಷಕ ದಳದಿಂದ ವರ್ಷಕ್ಕೆ ಸಾವಿರ ಗಿಡ ನೆಡುವ ಯೋಜನೆ: ಡಾ. ಮುರಲೀ ಮೋಹನ್ ಚಿಂತೂರು

Update: 2018-07-20 11:22 GMT

ಬಂಟ್ವಾಳ, ಜು. 20: ಗೃಹ ರಕ್ಷಕ ದಳದ ವತಿಯಿಂದ ವರ್ಷಕ್ಕೆ ಒಂದು ಸಾವಿರ ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ ಎಂದು ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಲೀ ಮೋಹನ್ ಚಿಂತೂರು ಹೇಳಿದ್ದಾರೆ.

ಗೃಹ ರಕ್ಷಕ ದಳದ ವತಿಯಿಂದ ಶುಕ್ರವಾರ ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲಾ ವಠಾರದಲ್ಲಿ ನಡೆದ "ವನಮಹೋತ್ಸವ ಹಾಗೂ ಪರಿಸರ ಸಂರಕ್ಷಣೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಗೃಹ ರಕ್ಷಕ ಸಿಬ್ಬಂದಿಗೆ ತಲಾ ಒಂದು ಗಿಡದಂತೆ, ಪ್ರತಿಯೊಂದು ಸಿಬ್ಬಂದಿಗೂ ಗಿಡ ನೆಟ್ಟು ಪೋಷಿಸುವ ಜಬಾಬ್ದಾರಿ ನೀಡಲಾಗಿದೆ. ಈ ಅಭಿಯಾನ ಜಿಲ್ಲೆಯ ಪ್ರತೀ ತಾಲೂಕು ಕೇಂದ್ರದಲ್ಲೂ ನಡೆಯಲಿದೆ ಎಂದವರು ತಿಳಿಸಿದರು.

ಸಮಾಲೋಚನೆ: ಕಾರ್ಯಕ್ರಮಕ್ಕೆ ಮುನ್ನ ಮಿನಿ ವಿಧಾನ ಸೌಧದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದ ಕಮಾಂಡೆಂಟ್ ಡಾ. ಚಿಂತೂರು, ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿದರು.

ಗೃಹ ರಕ್ಷಕ ಸಿಬ್ಬಂದಿ ಕರ್ತವ್ಯದ ಅವಧಿ ವೇಳೆ ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಟಿಕೆಟ್ ನೀಡಲಾಗುತ್ತಿದೆ ಎಂದು ಸಿಬ್ಬಂದಿಯೊಬ್ಬರು ಸಮಸ್ಯೆಯನ್ನು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಮವಸ್ತ್ರ ಧರಿಸಿ ಪ್ರಯಾಣಿಸುವ ಸಂದರ್ಭದಲ್ಲಿ ಗೃಹರಕ್ಷಕ ಸಿಬ್ಬಂದಿಗಳಿಗೆ ಉಚಿತ ಪ್ರಯಾಣಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ. ಆದರೂ ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದಾಗಿ ತಿಳಿಸಿದರು.

ಸಮಾಜ ಕಲ್ಯಾಣ ವಸತಿ ಶಾಲಾ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಘಟಕಾಧಿಕಾರಿ ಬಿ.ಆರ್.ಶ್ರೀನಿವಾಸ ಆಚಾರ್ಯ, ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್, ಪತ್ರಕರ್ತ ಫಾರೂಕ್ ಬಂಟ್ವಾಳ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News