ಗೂಢಚರ್ಯೆ ಉಪಗ್ರಹದ ರೂವಾರಿ ಹುದ್ದೆಯಿಂದ ವಜಾ,ಇಸ್ರೋ ಅಧ್ಯಕ್ಷರಿಗೆ ಸಲಹೆಗಾರನಾಗಿ ನೇಮಕ
ಹೊಸದಿಲ್ಲಿ,ಜು.20: ಅಭೂತಪೂರ್ವ ಕ್ರಮವೊಂದರಲ್ಲಿ ಅಹ್ಮದಾಬಾದ್ನ ಇಸ್ರೋ ಸ್ಪೇಸ್ ಅಪ್ಲಿಕೇಷನ್ ಸೆಂಟರ್(ಎಸ್ಎಸಿ)ನ ನಿರ್ದೇಶಕರಾಗಿದ್ದ ಭಾರತದ ಗೂಢಚರ್ಯೆ ಉಪಗ್ರಹಗಳ ಪ್ರಮುಖ ರೂವಾರಿ ಡಾ.ತಪನ್ ಕೆ.ಮಿಶ್ರಾ ಅವರನ್ನು ಗುರುವಾರ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಎಸ್ಎಸಿಯಲ್ಲಿ ಗೂಢಚರ್ಯೆ ಉಪಗ್ರಹಗಳು ನಿರ್ಮಾಣಗೊಳ್ಳುತ್ತವೆ. ದಟ್ಟ ಮೋಡಗಳಿದ್ದರೂ ತನ್ನ ಶತ್ರು ನೆರೆರಾಷ್ಟ್ರಗಳ ಮೇಲೆ ಹಗಲು ಮತ್ತು ರಾತ್ರಿ ನಿಗಾಯಿರಿಸುವ ಸಾಮರ್ಥ್ಯವನ್ನು ಭಾರತಕ್ಕೆ ಒದಗಿಸಿರುವ ರಾಡಾರ್ಸ್ಯಾಟ್ ಸರಣಿ ಉಪಗ್ರಹಗಳ ಅಭಿವೃದ್ಧಿಯಲ್ಲಿ ತನ್ನ ಪಾತ್ರಕ್ಕಾಗಿ ಡಾ.ಮಿಶ್ರಾ ವಿಶ್ವಾದ್ಯಂತ ಹೆಸರಾಗಿದ್ದಾರೆ. ಅವರು ಭಾರತದ ಗೂಢಚರ್ಯೆ ಉಪಗ್ರಹ ರಿಸ್ಯಾಟ್ 1ನ ಶಿಲ್ಪಿಯಾಗಿದ್ದರು. ಈ ಉಪಗ್ರಹವು ಅಂತಃಸ್ಫೋಟದಿಂದಾಗಿ ಕಕ್ಷೆಯಲ್ಲಿ ನಾಶಗೊಂಡಿದ್ದು,ಇದನ್ನು ನಾಸಾ ಮೊದಲು ಗಮನಿಸಿತ್ತು.
ಡಾ.ಮಿಶ್ರಾ ಅವರನ್ನು ಜು.19ರ ಅಪರಾಹ್ನದಿಂದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ತನ್ನ ಆದೇಶದಲ್ಲಿ ತಿಳಿಸಿದ್ದಾರೆ. ಡಾ.ಮಿಶ್ರಾ ಅವರನ್ನು ಬೆಂಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಎತ್ತಂಗಡಿ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಉಸ್ತುವಾರಿ ಹೊಂದಿರುವ ಬಾಹ್ಯಾಕಾಶ ಇಲಾಖೆಯ ಅಧೀನದಲ್ಲಿ ಇಸ್ರೋ ಕಾರ್ಯ ನಿರ್ವಹಿಸುತ್ತಿದೆ.
ಇಸ್ರೋದ ಆಸ್ತಿಗಳನ್ನು ಖಾಸಗೀಕರಣಗೊಳಿಸುವ ದಿಢೀರ್ ಕ್ರಮವನ್ನು ವಿರೋಧಿಸುವಲ್ಲಿ ಡಾ.ಮಿಶ್ರಾ ಮುಂಚೂಣಿಯಲ್ಲಿದ್ದರು. ಅಲ್ಲದೆ ದೇಶಕ್ಕೆ ಉಪಗ್ರಹ ಆಧರಿತ ಅಂತರ್ಜಾಲ ಸೇವೆಯನ್ನೊದಗಿಸುವ ಪ್ರಮುಖ ಉಪಗ್ರಹದ ಉಡಾವಣೆಯನ್ನು ಭಾರತವು ವಿಳಂಬಗೊಳಿಸುತ್ತಿರುವ ಬಗ್ಗೆಯೂ ಅವರು ಆಕ್ರೋಶಭರಿತ ಕಳವಳಗಳನು ವ್ಯಕ್ತಪಡಿಸಿದ್ದರು.
ಡಾ.ಮಿಶ್ರಾರನ್ನು ವಜಾಗೊಳಿಸಿರುವುದನ್ನು ಇಸ್ರೋ ವಕ್ತಾರರು ದೃಢಪಡಿಸಿದರಾದರೂ,ಅವರನ್ನು ಇಸ್ರೋ ಅಧ್ಯಕ್ಷರ ಹಿರಿಯ ಸಲಹೆಗಾರನಾಗಿ ನೇಮಕಗೊಳಿಸಲಾಗಿದೆ ಎಂದು ತಿಳಿಸಿದರು.
ಡಾ.ಮಿಶ್ರಾ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿರುವರಾದರೂ, ವಿಶೇಷ ಪರೀಕ್ಷೆಗಳಿಗಾಗಿ ಇತ್ತೀಚಿಗೆ ಫ್ರೆಂಚ್ ಗಯಾನಾದ ಕೌರುನಿಂದ ವಾಪಸ್ ತರಿಸಿಕೊಳ್ಳಲಾದ ಭಾರತದ ಅತ್ಯಂತ ಭಾರದ ಉಪಗ್ರಹ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.