ಕಡಬ: ಒಂಟಿ ವೃದ್ಧೆಯ ಮನೆಗೆ ನುಗ್ಗಿ ಚಿನ್ನ ಎಗರಿಸಿದ ಕಳ್ಳರು

Update: 2018-07-21 09:01 GMT

ಕಡಬ, ಜು.21: ಪೇಟೆಯ ಹೊರವಲಯದ ಕೊರುಂದೂರು ಎಂಬಲ್ಲಿ ಮಹಿಳೆಯೊಬ್ಬರು ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ವೃದ್ಧೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಕೋರಂದೂರು ಹರೀಶ್ ಎಂಬವರ ತಾಯಿ 90ನೇ ವಯಸ್ಸಿನ ಸತ್ಯಭಾಮಾರ ಕತ್ತಿನಲ್ಲಿದ್ದ ಸುಮಾರು ನಾಲ್ಕು ಪವನ್‍ನ ಚಿನ್ನದ ಸರವನ್ನು ಇಬ್ಬರು ಕಳ್ಳರು ಎಗರಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಹರೀಶ್ ಮತ್ತು ಅವರ ತಾಯಿ ಇಬ್ಬರೇ ವಾಸವಾಗಿದ್ದು, ಹರೀಶ್ ಸಂಜೆ ಕಡಬ ಪೇಟೆಗೆ ತೆರಳಿದ್ದರು. ಇದೇ ವೇಳೆ ಸಂಜೆ ಸುಮಾರು 7:30ರ ಸುಮಾರಿಗೆ  ಇಬ್ಬರು ಕಳ್ಳರು ಈ ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ಸತ್ಯಭಾಮಾ ತನ್ನ ಮಗ ಬಂದಿರಬಹುದೆಂದು ತಕ್ಷಣ ಬಾಗಿಲು ತೆರೆದಿದ್ದಾರೆ. ಬಾಗಿಲು ತೆರೆಯವುದನ್ನೇ ಕಾದಿದ್ದ ಕಳ್ಳರು ವೃದ್ಧೆಯ ಕತ್ತಿಗೆ ಕೈ ಹಾಕಿ ಸರವನ್ನು ಎಗರಿಸಿದ್ದಾರೆ. ಪಕ್ಕದಲ್ಲಿ ಯಾವುದೇ ಮನೆಗಳು ಇರದ ಕಾರಣ ಅಜ್ಜಿಯ ಕೂಗು ಯಾರಿಗೂ ಕೇಳಿಸಿಲ್ಲ. ಘಟನೆ ನಡೆದು ಅರ್ಧ ಗಂಟೆ ಬಳಿಕ ಹರೀಶ್ ಮನೆಗ ವಾಪಸ್ ಬಂದಾಗ ವಿಷಯ ಬೆಳಕಿಗೆ ಬಂದಿದೆ.

ವಿಷಯ ತಿಳಿದ ಕಡಬ ಎಸ್ಸೈ ಪ್ರಕಾಶ್ ದೇವಾಡಿಗ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಜ್ಜಿಯಿಂದ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News