ಆಳ್ವಾಸ್ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ 2018-19 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Update: 2018-07-21 18:50 GMT

ಮೂಡಬಿದಿರೆ,ಜು.21: ವಿದ್ಯಾರ್ಥಿ ಸಮುದಾಯ ಎನ್.ಎಸ್.ಎಸ್ ಹಾಗೂ ಎನ್ ಸಿ.ಸಿ ಸಂಘಟನೆಗಳಿಗೆ ಕೇವಲ ಮನೋರಂಜನೆ, ವಿಹಾರ, ವಿನೋದದ ಉದ್ದೇಶದಿಂದ ಸೇರದೆ, ಸೇವಾ ಮನೋಭಾವದಿಂದ  ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಾಗ ಸಿಗುವ ಸಂತೋಷ ಅನನ್ಯವಾದುದ್ದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ ಎಂ ಮೋಹನ್ ಆಳ್ವ ತಿಳಿಸಿದರು. 

ಅವರು ಶನಿವಾರ, ಕುವೆಂಪು ಸಭಾಭವನದಲ್ಲಿ,  ಆಳ್ವಾಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ 2018-19 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ದೇವಸ್ಥಾನಗಳ ಸರ್ವೇಕ್ಷಣ ಕೃತಿ ಬಿಡುಗಡೆ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ವಿದ್ಯಾರ್ಥಿ ಶಕ್ತಿಯಿಂದಲೇ ಕೆಲಸ ಮಾಡುವ ಇಂತಹ ಸಂಘಟನೆಗಳು, ಸೇವೆ, ಶಿಸ್ತು, ಸಂಯಮ, ಶ್ರೇಷ್ಠತೆಯ ದ್ಯೋತಕವಾಗಿವೆ.  ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿ ಇಂತಹ ಸಂಘಟನೆಗಳಲ್ಲಿ ಪಾಲ್ಗೊಂಡು ಸಮಾಜಕ್ಕಾಗಿ ಬದುಕುವ ಮನೋಭಾವವನ್ನು ಉದ್ದೀಪಗಳಿಸಿಕೊಳ್ಳಬಹುದು. ಅಲ್ಲದೆ, ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಶ್ರಮದ ಮಹತ್ವ ವಿದ್ಯಾರ್ಥಿಗಳಿಗೆ ಇದರಿಂದ ತಿಳಿಯುತ್ತದೆ. ಸೇವೆಯಿಂದ ಸಿಗುವ ಸುಖ ಹಾಗೂ ಜೀವನ ಪ್ರೀತಿ ಪದಗಳಿಂದ ವರ್ಣಿಸಲಾಗದ್ದು, ಅದನ್ನು ಅನುಭವಿಸದನೇ ಬಲ್ಲ ಎಂದು ತನ್ನ ಜೀವನದಲ್ಲಿ ನಡೆದ ಕೆಲವು ಘಟನೆಯನ್ನು ಹಂಚಿಕೊಂಡರು. 

ಆಳ್ವಾಸ್ ಶಿಕ್ಷಣ ಸಂಸ್ಥೆ ಸಾರ್ವಜನಿಕ ಸೇವಾ  ಸಂಸ್ಥೆಗಳಿಗೆ ಸದಾ ಸಹಕಾರ ನೀಡುತ್ತಾ ಬಂದಿದ್ದು, ಆಳ್ವಾಸ್‍ನಲ್ಲಿ ಕಳೆದ ವರ್ಷ ನಡೆದ 11 ಎನ್ ಸಿ.ಸಿ  ಕ್ಯಾಂಪ್‍ಗಳೆ ಇದಕ್ಕೇ ಸಾಕ್ಷಿ ಎಂದರು. ಅಲ್ಲದೆ  ಆಳ್ವಾಸ್ ಎನ್ ಎಸ್ ಎಸ್ ಕಾರ್ಯಯೋಜನೆಯಾದ ಅರಣ್ಯೀಕರಣಕ್ಕಾಗಿ ಸಂಸ್ಥೆಯ ಜಾಗವನ್ನು ನೀಡುವುದಾಗಿ ತಿಳಿಸಿದರು.

ದೇವಸ್ಥಾನಗಳ ಸರ್ವೇಕ್ಷಣ ಕೃತಿಯ ರೂವಾರಿಗಳಾದ ಎಂ ಗೌರವ್ ಪ್ರಭು ಹಾಗೂ ಪದ್ಮರಾಜ್ ರೈ ತಮ್ಮ ಅನುಭವ ಹಂಚಿಕೊಂಡರು. ಈ ಕೃತಿ  ಮೂಡಬಿದಿರೆ ಆಸುಪಾಸಿನ 30 ದೇವಸ್ಥಾನಗಳ ಮಾಹಿತಿಯನ್ನು ಒಳಗೊಂಡಿದ್ದು, ಸದ್ಯದಲ್ಲೇ ಈ ಮಾಹಿತಿಯನ್ನು ಕನ್ನಡ ವಿಕೀಪಿಡಿಯಾಕ್ಕೂ ಸೇರಿಸುವ ಯೋಚನೆಗಳಿವೆ. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡದ ಎಲ್ಲಾ ದೇವಾಲಯಗಳ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಹೊರತರುವ ಇರಾದೆ ಇದೆ ಎಂದರು. 

ಪದವಿ ಕಾಲೇಜಿನ ಪ್ರಾಚಾರ್ಯ  ಡಾ ಕುರಿಯನ್ ಮಾತನಾಡಿ, ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ, ಅನುಕಂಪ, ಸಹಾಯ ಅಗತ್ಯವಿರುವ ಜೀವಕ್ಕೆ ಸ್ಪಂದಿಸುವ ಮನಸ್ಸು ಮತ್ತು ಹೃದಯ ನಮ್ಮದಾಗಬೇಕು ಎಂದರು. ಇನ್ನೊಬ್ಬರ ಕಷ್ಟಕ್ಕೆ ಸದಾ ಆಸರೆಯಾಗುವ ಡಾ ಮೋಹನ್ ಆಳ್ವರು ಸೇವಾ ಮನೋಭಾವದ ಚಿಲುಮೆಯಾಗಿದ್ದಾರೆ ಎಂದರು. ಜಯಶ್ರೀ ಸ್ವಾಗತಿಸಿ, ಸ್ಪೂರ್ತಿ ಹೆಗ್ಡೆ ನಿರೂಪಿಸಿ, ಚೇತನ ವಂದಿಸಿದರು.   

ಸಹಾಯಕ ಪ್ರಾಧ್ಯಪಕ ಅಶೋಕ ಕೆ.ಜಿ,  ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿಗಳಾದ ವಸಂತ ಎ, ನವ್ಯಾ ಶೆಟ್ಟಿ, ವರುಣ ಡೋಂಗ್ರೆ, ಚೇತನಾ ಎಂ ಜೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News