ಜಮ್ಮು ಕಾಶ್ಮಿರ ಎನ್ಕೌಂಟರ್ ಗೆ ಇಬ್ಬರು ಉಗ್ರರು ಬಲಿ
ಶ್ರೀನಗರ, ಜು. 24: ಜಮ್ಮು ಹಾಗೂ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಲಷ್ಕರೆ ತಯ್ಯಿಬದ ಇಬ್ಬರು ಉಗ್ರರು ಹತರಾಗಿದ್ದಾರೆ. ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆ ಜಿಲ್ಲೆಯ ಲಾಲ್ಚೌಕ್ ಪ್ರದೇಶವನ್ನು ಸುತ್ತುವರಿಯಿತು ಹಾಗೂ ಶೋಧ ಕಾರ್ಯಾಚರಣೆ ನಡೆಸಿತು.
ಉಗ್ರರು ಭದ್ರತಾ ಪಡೆಯ ಯೋಧರ ಮೇಲೆ ದಾಳಿ ನಡೆಸಿದರು. ಯೋಧರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತದೇಹಗಳ ಬಳಿ ಪತ್ತೆಯಾದ ವಿವರಗಳಿಂದ ಅವರು ಲಷ್ಕರೆ ತಯ್ಯಿಬದ ಉಗ್ರರು ಎಂದು ಗುರುತಿಸಲಾಗಿದೆ. ಇವರಲ್ಲಿ ಓರ್ವನನ್ನು ಬಿಲಾಲ್ ಅಹ್ಮದ್ ದಾರ್ ಹಾಗೂ ಇನ್ನೋರ್ವನನ್ನು ಅಬಿದ್ ಹುಸೈನ್ ಭಟ್ ಎಂದು ಗುರುತಿಸಲಾಗಿದೆ. ಈ ನಡುವೆ ಉತ್ತರಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಗುಂಟ ಕೇರನ್ ವಲಯದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.