ಮಣಿಪಾಲ: ಇಸ್ಪಿಟ್ ಕ್ಲಬ್ ಮಾಲಕನ ಹತ್ಯೆ; ನಾಲ್ವರ ತಂಡದ ಕೃತ್ಯ

Update: 2018-07-29 10:51 GMT

ಉಡುಪಿ, ಜು.29: ಇಲ್ಲಿನ ಮಣಿಪಾಲ ಸಮೀಪದ ಇಸ್ಪೀಟ್ ಕ್ಲಬ್ ಒಂದರಲ್ಲಿ ತಂಡವೊಂದು ಮಾಲಕನನ್ನು ಇರಿದು ಕೊಂದಿರುವ ಘಟನೆ ನಡೆದಿದೆ.

ಮೃತರನ್ನು ಉಡುಪಿಯ ಪುತ್ತೂರು ಗ್ರಾಮದ ಗುರುಪ್ರಸಾದ್ ಭಟ್ (45) ಎಂದು ಗುರುತಿಸಲಾಗಿದೆ. ಗುರುಪ್ರಸಾದ್ ಅವರು ಕ್ಲಬ್ ನಲ್ಲಿದ್ದ ವೇಳೆ ಓಮ್ನಿಯಲ್ಲಿ ಆಗಮಿಸಿದ ದುಷ್ಕರ್ಮಿಗಳು ಕ್ಲಬ್ ಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ನಂತರ ಅದೇ ಕಾರಿನಲ್ಲಿ ತಂಡ ಪರಾರಿಯಾಗಿದೆ.

ಗಂಭೀರ ಗಾಯಗೊಂಡಿದ್ದ ಗುರುಪ್ರಸಾದ್ ರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. 

ಗುರುಪ್ರಸಾದ್ ಹಣದ ವ್ಯವಹಾರವನ್ನೂ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಕೆಲ ವರ್ಷಗಳ ಹಿಂದೆ ಇವರು ‘ಸತ್ಯ ನ್ಯೂಸ್’ ಎಂಬ ವಾರ ಪತ್ರಿಕೆಯನ್ನೂ ನಡೆಸುತ್ತಿದ್ದರು.

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲಿಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಮಣಿಪಾಲ ಇನ್ ಸ್ಪೆಕ್ಟರ್ ಸುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News