ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಡಿಪೋಗೆ ಎಸಿಬಿ ದಾಳಿ

Update: 2018-08-02 11:02 GMT

ಬಂಟ್ವಾಳ, ಆ.2: ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಡಿಪೋಗೆ ಮಂಗಳೂರು ಎಸಿಬಿ ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿದ್ದಾರೆ.
ಇಲ್ಲಿನ ಸಿಬ್ಬಂದಿಯೊಬ್ಬರ ದೂರಿನ ಹಿನ್ನಲೆಯಲ್ಲಿ ಬಿ.ಸಿ.ರೋಡ್-ಕೈಕಂಬ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಕೆಎಸ್ಸಾರ್ಟಿಸಿ ಡಿಪೋಗೆ ಈ ದಾಳಿ ನಡೆದಿದೆ.

ಕೆಎಸ್ಸಾರ್ಟಿಸಿ ಡಿಪೋಗಳಲ್ಲಿ ಹಣಕಾಸಿನ ಅವ್ಯವಹಾರ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಮೈಸೂರು ಘಟಕದ ಕೆಎಸ್ಸಾರ್ಟಿಸಿ ಸಿಬ್ಬಂದಿ ಫಾರೂಕ್ ಖಾನ್ ಕೆ. ಎಂಬವರು ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬುಧವಾರ ಮಂಗಳೂರು ಹಾಗೂ ಇಂದು ಬೆಳಗ್ಗೆ ಬಂಟ್ವಾಳ ಕೆಎಸ್ಸಾರ್ಟಿಸಿ ಡಿಪೋಗೆ ದಾಳಿ ನಡೆಸಿದ್ದಾರೆ. ಈ ವೇಳೆ ಕಚೇರಿಯಲ್ಲಿದ್ದ ಚಾಲಕ ಮತ್ತು ನಿರ್ವಾಹಕರನ್ನು ತನಿಖೆ ನಡೆಸಿ, ನಗದು ಶಾಖೆಯಲ್ಲಿ ಹಣಕಾಸಿನ ಅವ್ಯವಹಾರದ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ, ಇನ್ನಿತರ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಎಡಿಜಿಪಿ, ಎಸಿಬಿ ನಿರ್ದೇಶನದಂತೆ ಪಶ್ಚಿಮ ವಲಯ ಎಸಿಬಿ ಎಸ್ಪಿ ಶೃತಿ, ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಯೋಗೀಶ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News