ಭಾವನೆಗಳ ಸಂವೇದನಾಶೀಲ ಅಭಿವ್ಯಕ್ತಿಗೆ ಭಾಷೆ ಅತ್ಯಗತ್ಯ: ಪ್ರೊ. ಎಚ್.ಎಂ. ಮಹೇಶ್ವರಯ್ಯ

Update: 2018-08-05 17:43 GMT

ಮಂಗಳೂರು, ಆ.5: ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲದಿರುವ ಭಾಷಾ ವೈವಿಧ್ಯತೆ ಭಾರತದಲ್ಲಿದ್ದು, ಅಧ್ಯಯನವೊಂದರ ಪ್ರಕಾರ ಅದಕ್ಕೆ ಇಲ್ಲಿ ಸುಮಾರು 1,650 ಭಾಷೆಗಳು ಇದ್ದುದು ಸಾಕ್ಷಿ. ಕಳೆದ 50 ವರ್ಷಗಳಲ್ಲಿ ದೇಶದ ಐದನೇ ಒಂದರಷ್ಟು ಭಾಷೆಗಳು ನಾಶ ಹೊಂದಿವೆ. ಪ್ರಸ್ತುತ ದೇಶದ 750 ಭಾಷೆಗಳು ಮಾತ್ರ ಜೀವಂತವಾಗಿವೆ. ಭಾವನೆಗಳ ಸಂವೇದನಾಶೀಲ ಅಭಿವ್ಯಕ್ತಿಗೆ ಭಾಷೆಯು ಅತ್ಯಗತ್ಯವಾಗಿದೆ. ಭಾಷಾ ಸಂವರ್ಧನೆ ಮೂಲಕ ಮುಂದಿನ ಪೀಳಿಗೆಗೆ ಭಾಷೆಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ಕಲಬುರ್ಗಿಯ ಕರ್ನಾಟಕ ರಾಜ್ಯ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ವಿಭಾಗ ವತಿಯಿಂದ ನಗರದ ಕೆನರಾ ಪದವಿ ಕಾಲೇಜು ಸೆಮಿನಾರ್ ಹಾಲ್‌ನಲ್ಲಿ ರವಿವಾರ ನಡೆದ ‘ಭಾಷಾ ಸಂವರ್ಧನೆ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ತಬ್ಧವಾದ ವೌಖಿಕತೆ ದೇಶಕ್ಕೆ ಬೌದ್ಧಿಕ ಬರ ತರುತ್ತದೆ. ಭಾಷೆಯ ನಾಶದಿಂದ ಬುದ್ಧಿಶಕ್ತಿಯ ದಾಸ್ತಾನು ಕೂಡಾ ದುರ್ಬಲಗೊಳ್ಳುತ್ತದೆ ಎಂದ ಪ್ರೊ. ಎಚ್. ಎಂ. ಮಹೇಶ್ವರಯ್ಯ ಭಾಷೆಯ ಉಳಿವಿಗೆ ಕೇಂದ್ರ ಸರಕಾರ ಕ್ರಮ ಕೈಗೊಂಡಿದ್ದು, ಕೇಂದ್ರೀಯ ವಿದ್ಯಾಲಯ ಮೂಲಕ ಭಾಷೆಗಳ ದಾಖಲೀಕರಣ ಮಾಡಲಾಗುತ್ತಿದೆ. ಕರಾವಳಿಯ ಕೊರಗ, ಬೆಳಾರಿ ಭಾಷೆಗಳ ದಾಖಲೀಕರಣ ಮಾಡಲಾಗುತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನಮ್ಮದು ಬಹುಭಾಷಾ, ಸಂಸ್ಕೃತಿಯ ದೇಶ. ಬಹುತ್ವದ ಆಚಾರ ವಿಚಾರಗಳು ವಿಶ್ವದಲ್ಲಿ ದೇಶಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿದೆ. ಸಂಸ್ಕೃತ ಭಾಷೆಯು ದೇಶದ ಪ್ರಾಚೀನ ಭಾಷೆಯಾಗಿದೆ. ಭಾರತದ ಎಲ್ಲ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಇದೆ. ಭಾಷೆ ಜನಪ್ರಿಯಗೊಳ್ಳಲು, ಉಳಿಯಲು ಮಾಧ್ಯಮಗಳ ಪಾತ್ರವಿದೆ. ಆದರೆ ಇಂದಿನ ಮಾಧ್ಯಮಗಳು ಭಾಷೆಯನ್ನು ನಾಶ ಮಾಡುತ್ತಿವೆ. ಪ್ರತಿ ವಾಕ್ಯದಲ್ಲೂ ಇಂಗ್ಲಿಷ್ ಬಳಕೆ ಮೂಲಕ ಕನ್ನಡಕ್ಕೆ ತೊಡಕುಂಟುಮಾಡುತ್ತಿವೆ. ಇವೆಂಟ್ ಮ್ಯಾನೇಜರ್‌ಗಳು, ಆ್ಯಂಕರ್‌ಗಳು ಪ್ರಾದೇಶಿಕ ಭಾಷೆಯನ್ನು ಹಾಳು ಮಾಡುತ್ತಿದ್ದಾರೆ. ಕೆಲವು ಸಿನೆಮಾಗಳೂ ಕೂಡಾ ಭಾಷೆಯನ್ನು ಕುಲಗೆಡಿಸುತ್ತಿವೆ ಎಂದರು.

ಕನ್ನಡ ಭಾಷೆಯನ್ನು ಯಕ್ಷಗಾನವು ಉಳಿಸುತ್ತಿವೆ. ಸಾಮರಸ್ಯದ ಬದುಕಿಗೆ ತುಳು ಭಾಷೆಯು ದೊಡ್ಡ ಕೊಡುಗೆಯನ್ನೇ ನೀಡುತ್ತಿವೆ. ಶೈಕ್ಷಣಿಕ ಸಂಸ್ಥೆಗಳು ಕೂಡಾ ದೇಶಿಯ ಭಾಷೆಗಳ ಉಳಿವಿಗೆ ಮುಂದಾಗಬೇಕು. ನ.15ರಿಂದ 18ರವರೆಗೆ ನಡೆಯುವ ಆಳ್ವಾಸ್ ನುಡಿಸಿರಿಯಲ್ಲಿ ‘ಕರ್ನಾಟಕ ದರ್ಶನ’ ಪರಿಕಲ್ಪನೆಯೊಂದಿಗೆ ಭಾಷೆಯನ್ನು ಪ್ರಮುಖ ವಿಚಾರವಾಗಿಟ್ಟುಕೊಂಡು ಚಿಂತನ ಮಂಥನ ನಡೆಸಲಾಗುವುದು ಎಂದು ಡಾ.ಮೋಹನ್ ಆಳ್ವ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ದಿಕ್ಸೂಚಿ ಭಾಷಣಗೈದರು. ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ರಘುನಂದನ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಉಪಸ್ಥಿತರಿದ್ದರು.

ಕಾರ್ಯಾಗಾರ ಸಂಚಾಲನಾ ಸಮಿತಿ ಅಧ್ಯಕ್ಷ ರಮೇಶ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಶೈಲೇಶ್ ವಂದಿಸಿದರು. ಉಪನ್ಯಾಸಕ ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News