​ಖಾಸಗಿ ಬಸ್ ಢಿಕ್ಕಿ: ಮಹಿಳೆಗೆ ಗಾಯ

Update: 2018-08-08 16:48 GMT

ಮಂಗಳೂರು, ಆ.8: ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಾಯಗೊಂಡ ಘಟನೆ ಕೋಟೆಕಾರ್ ಬೀರಿ ಜಂಕ್ಷನ್‌ನಲ್ಲಿ ನಡೆದಿದೆ.
ಕೋಟೆಕಾರ್-ಮಾಡೂರು ನಿವಾಸಿ ಬಿ.ಫಾತಿಮಾ(50) ಗಾಯಾಳು.

ಗಾಯಾಳು ಪುತ್ರ ಅಬ್ದುಲ್ ಖಾದರ್ ಮಂಗಳವಾರ ತನ್ನ ತಾಯಿ ಫಾತಿಮಾ ಅವರನ್ನು ಆಕ್ಟಿವಾ ಸ್ಕೂಟರ್‌ನಲ್ಲಿ ಕುಳ್ಳಿರಿಸಿಕೊಂಡು ಕೋಟೆಕಾರಿನ ಕ್ಲೀನಿಕ್‌ಗೆ ತೆರಳಿ ವಾಪಸಾಗುತ್ತಿದ್ದರು. ಕೋಟೆಕಾರ್ ಬೀರಿ ಜಂಕ್ಷನ್‌ನಲ್ಲಿ ಪುತ್ರ ತಾಯಿಯನ್ನು ಇಳಿಸಿದ್ದರು. ಈ ವೇಳೆ ಮಂಗಳೂರಿನಿಂದ ತಲಪಾಡಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷದಿಂದ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದು, ವಾಹನ ನಿಲ್ಲಿಸದೇ ಪರಾರಿಯಾಗಿದೆ.

ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಬಿ.ಫಾತಿಮಾ ಗಾಯಗೊಂಡಿದ್ದಾರೆ. ಗಾಯಾಳುವನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News