ಬಂಟ್ವಾಳ: ಅಪಾಯಕಾರಿ 9 ಮೀಟರ್ ಮಟ್ಟದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿ

Update: 2018-08-14 09:48 GMT

ಬಂಟ್ವಾಳ, ಆ. 14: ಪಶ್ಚಿಮ ಘಟ್ಟ ಸಹಿತ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ನೇತ್ರಾವತಿ ನದಿಯು 9.3 ಮೀ. ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. 

ಶಂಭೂರಿನ ಡ್ಯಾಂನ ಎಲ್ಲ ಬಾಗಿಲನ್ನು ತೆರೆದು ನೀರನ್ನು ಹೊರ ಹರಿಯಲು ಬಿಟ್ಟ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬಂಟ್ವಾಳ ವ್ಯಾಪ್ತಿಯ ನದಿ ತಟದ ಪ್ರದೇಶದ ವಿವಿಧ ಪ್ರದೇಶಗಳಿಗೆ ನೀರು ನುಗ್ಗಿ ಕೃತಕ ನೆರೆ ಉಂಟಾಗಿ ಪ್ರವಾಹದ ವಾತಾವರಣ ಸೃಷ್ಠಿಯಾಗಿದೆ.

ಸೋಮವಾರ ರಾತ್ರಿಯಿಂದಲೇ ನೇತ್ರಾವತಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿದು ಇಂದು ಮುಂಜಾನೆ ವೇಳೆಗೆ ತಗ್ಗು ಪ್ರದೇಶಗಳೆಲ್ಲಾ ಜಲಾವೃತ ಗೊಂಡಿತು. ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆಯೇ ಜನರಲ್ಲೂ ಆತಂಕ ಹೆಚ್ಚಾಗ ತೊಡಗಿದೆ.

ಎಲ್ಲೆಲ್ಲಿ ನೆರೆ?: 

ಜಕ್ರಿಬೆಟ್ಟು ಪರಿಸರದಲ್ಲಿ ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾದರೆ, ಬಡ್ಡಕಟ್ಟೆಯಲ್ಲಿ ಬಸ್ ನಿಲ್ದಾಣ ಜಲಾವೃತಗೊಂಡಿತು. ಇಲ್ಲಿನ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ತಳ ಅಂತಸ್ತಿನ ಅಂಗಡಿ, ಹೊಟೇಲ್‌ಗಳಿಗೆ ನೀರು ನುಗ್ಗಿ ಅಂಗಡಿಯೊಳಗಿದ್ದ ಸಾಮಾನುಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಬಡ್ಡಕಟ್ಟೆ ಮಾರುಕಟ್ಟೆಯ ಹಿಂಭಾಗ ನೀರು ತುಂಬಿಕೊಂಡಿತು. ಅಲ್ಲದೆ, ಪಾಣೆಮಂಗಳೂರು ವ್ಯಾಪ್ತಿಯ ವಿವಿಧೆಡೆ ಕೃಷಿ ತೋಟಕ್ಕೆ ನೀರು ನುಗ್ಗಿ ಅಡಿಕೆ, ತೆಂಗಿನ ಮರಗಳು, ಬಾಳೆಗಿಡಗಳು ಪ್ರವಾಹಕ್ಕೆ ಹೊಚ್ಚಿ ಹೋಗಿವೆ.

ನೇತ್ರಾವತಿ ನದಿ ತಟದಲ್ಲಿರುವ ಸರಪಾಡಿ ಗ್ರಾಪಂ ವ್ಯಾಪ್ತಿಯ ಅಜಿಲಮೊಗರು ದರ್ಗಾದ ಮುಂಭಾಗ ನೀರು ತುಂಬಿಕೊಂಡಿದ್ದು, ರಸ್ತೆ ಹಾಗೂ ಮಸೀಯ ಕೆಳ ಅಂತಸ್ತಿಗೆ ನೀರು ನುಗ್ಗಿದೆ. ಅಲ್ಲದೆ, ಬೀಯಪಾದೆ ರಸ್ತೆಯೂ ಮುಳುಗಡೆಯಾಗಿದೆ. ಆಲಡ್ಕ ಪರಿಸರದ ಮನೆಗಳ ಸುತ್ತಮುತ್ತ ಜಲಾವೃತಗೊಂಡು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಭಾರೀ ಮಳೆಯ ಪರಿಣಾಮ ನೇತ್ರಾವತಿ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿತ್ತು. ಇಂದರಿಂದಾಗಿ ತುಂಬೆ ಕಿಂಡಿಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, 5 ಮೀಟರ್ ನೀರು ಕಾಯ್ದಿರಿಸಿ ಡ್ಯಾಮಿನ ಎಲ್ಲ ಬಾಗಿಲುಗಳನ್ನು ತೆರೆಯುವ ಮೂಲಕ ಹೆಚ್ಚುವರಿ ನೀರನ್ನು ಹೊರ ಬಿಡಲಾಯಿತು. ಇದರ ಪರಿಣಾಮ ತುಂಬೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹ ಉಂಟಾಯಿತು. ಮಧ್ಯಾಹ್ನ ವೇಳೆಗೆ 9.3 ಮೀಟರ್ ಮಟ್ಟದಲ್ಲಿ ನೇತ್ರಾವತಿ ನದಿ ನೀರು ಹರಿಯುತ್ತಿತ್ತು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News