ಅಟಲ್ ಬಿಹಾರಿ ವಾಜಪೇಯಿಯವರ ಐದು ಸ್ಮರಣೀಯ ಭಾಷಣಗಳು

Update: 2018-08-16 17:06 GMT

ಹೊಸದಿಲ್ಲಿ, ಆ.16: ಗುರುವಾರ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಓರ್ವ ಉತ್ತಮ ರಾಜಕಾರಣಿ ಮಾತ್ರವಲ್ಲ ಕವಿ ಹಾಗೂ ವಾಗ್ಮಿ ಕೂಡಾ ಆಗಿದ್ದರು. ಕಾವ್ಯ ಹಾಗೂ ಹಾಸ್ಯದಿಂದ ಕೂಡಿದ್ದ ಅವರ ಮಾತುಗಳು ಸಾಮಾನ್ಯ ಜನರು ಸೇರಿದಂತೆ ರಾಜಕಾರಣಿಗಳು, ವಿದ್ಯಾರ್ಥಿಗಳು ಹಾಗೂ ಜಗತ್ತಿನ ಇತರ ನಾಯಕರನ್ನು ಸೂಜಿಗಲ್ಲಿನಂತೆ ಅವರತ್ತ ಸೆಳೆಯುತ್ತಿತ್ತು. ವಾಜಪೇಯಿಯವರು ಮಾಡಿರುವ ಕೆಲವು ಸ್ಮರಣೀಯ ಭಾಷಣಗಳ ಆಯ್ದ ಭಾಗಗಳು ಇಲ್ಲಿವೆ:

1. ಪೊಖ್ರಾಣ್ ಪರಮಾಣು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ:

ಇಂದು 15.45ರ ಸುಮಾರಿಗೆ ಭಾರತ ಪೊಖ್ರಾಣ್ ವಲಯದಲ್ಲಿ ಭೂಗತ ಪರಮಾಣು ಪರೀಕ್ಷೆ ನಡೆಸಿತು. ಮೂರು ವಿಭಿನ್ನ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದ್ದು ನಿರೀಕ್ಷಿತ ಫಲಿತಾಂಶವನ್ನು ಪಡೆಯಲಾಗಿದೆ. ಈ ಪರೀಕ್ಷೆಯ ಸಮಯದಲ್ಲಿ ವಾತಾವರಣಕ್ಕೆ ರೇಡಿಯೊ ಆ್ಯಕ್ಟಿವ್ ಕಿರಣಗಳು ಬಿಡುಗಡೆಯಾಗಿಲ್ಲ ಎನ್ನುವುದೂ ತಿಳಿದುಬಂದಿದೆ. ಇವುಗಳು 1974ರಲ್ಲಿ ಮಾಡಿದಂತೆ ನಿಯಂತ್ರಿತ ಸ್ಫೋಟಗಳ ಮಾದರಿಯಲ್ಲೇ ಇದ್ದವು. ಈ ಯಶಸ್ವಿ ಪರೀಕ್ಷೆ ನಡೆಸಿದ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ತಂಡಗಳಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.

2. 1996ರಲ್ಲಿ ತಮ್ಮ ಹದಿಮೂರು ದಿನಗಳ ಸರಕಾರ ಬಹುಮತವಿಲ್ಲದೆ ಬಿದ್ದ ಸಂದರ್ಭದಲ್ಲಿ: ನೀವು ದೇಶ ಮುನ್ನಡೆಸಲು ಬಯಸಿದ್ದೀರಾ. ಒಳ್ಳೆ ವಿಷಯ. ನನ್ನ ಶುಭಕಾಮನೆಗಳು ನಿಮ್ಮ ಜೊತೆಗಿದೆ. ನಾವು ಸಂಪೂರ್ಣವಾಗಿ ನಮ್ಮ ದೇಶದ ಸೇವೆಯಲ್ಲಿ ಭಾಗಿಯಾಗುತ್ತೇವೆ. ನಾವು ಬಹುಮತದ ಶಕ್ತಿಯ ಮುಂದೆ ತಲೆ ಬಾಗುತ್ತೇವೆ. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಾವು ನಮ್ಮ ಕೈಯಿಂದ ಆರಂಭಿಸಿದ ಕೆಲಸಗಳು ಸಂಪೂರ್ಣಗೊಳ್ಳುವವರೆಗೆ ನಾವು ವಿರಮಿಸುವುದಿಲ್ಲ ಎಂಬ ಭರವಸೆಯನ್ನು ನಾವು ನಿಮಗೆ ನೀಡುತ್ತೇವೆ. ಮಾನ್ಯ ಸಭಾಪತಿಯವರೇ,ನಾನು ನನ್ನ ರಾಜೀನಾಮೆಯನ್ನು ನೀಡಲು ರಾಷ್ಟ್ರಪತಿಯವರ ಬಳಿ ತೆರಳುತ್ತಿದ್ದೇನೆ.

3. 2002ರಲ್ಲಿ ಸ್ವಾತಂತ್ರ ದಿನದಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣ:

ನನ್ನ ಪ್ರೀತಿಯ ದೇಶವಾಸಿಗಳೇ, ಈ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಎಲ್ಲರೂ ಜೊತೆಯಾಗಿ ಸಾಗುವ, ಜೊತೆಯಾಗಿ ಪರಿಶ್ರಮಪಟ್ಟು ದೇಶದ ಕನಸನ್ನು ಸಾಕಾರಗೊಳಿಸುವ ಸಂದೇಶವನ್ನು ನಾನು ನೀಡುತ್ತಿದ್ದೇನೆ. ನಮ್ಮ ಗುರಿ ಅಂತ್ಯವಿಲ್ಲದ ಆಕಾಶದಷ್ಟು ಎತ್ತರವಿರಬಹುದು. ಆದರೆ ಹೃದಯದಲ್ಲಿ ದೃಢಸಂಕಲ್ಪದೊಂದಿಗೆ ಕೈ-ಕೈ ಜೋಡಿಸಿ ಮುಂದೆ ಸಾಗಿದಾದ ಗೆಲುವು ನಮ್ಮದಾಗಲಿದೆ. ಬನ್ನಿ, ಈ ಸಂಬಂಧವನ್ನು ಜೈ ಹಿಂದ್ ಎಂಬ ಘೋಷಣೆಯಿಂದ ಗಟ್ಟಿಗೊಳಿಸುವ. ನನ್ನ ಜೊತೆ ಘೋಷಣೆ ಕೂಗಿ-ಜೈಹಿಂದ್, ಜೈಹಿಂದ್, ಜೈ ಹಿಂದ್. ಧನ್ಯವಾದ.

4. 2000ದಲ್ಲಿ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಾಡಿದ ಭಾಷಣ: ನಾವು ಮುಕ್ತವಾಗಿ ಮಾತನಾಡಿದಾಗ, ಉಗ್ರವಾದದ ವಿರುದ್ಧ ಹೋರಾಡಲು, ಇಂಧನ ಮತ್ತು ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಅಂತರ್‌ರಾಷ್ಟ್ರೀಯ ಶಾಂತಿ ಕಾಪಾಡಲು ಪ್ರಜಾಪ್ರಭುತ್ವದಲ್ಲಿ ಹೊಸ ಸಾಧ್ಯತೆಗಳು ಮತ್ತು ಸಹಕಾರದ ಹೊಸ ಕ್ಷೇತ್ರಗಳ ಬಾಗಿಲು ತೆರೆಯಲ್ಪಡುತ್ತದೆ. ನಾವು ಹಂಚಿಕೊಂಡಿರುವ ವೌಲ್ಯಗಳು ಮತ್ತು ಏಕರೀತಿಯ ಆಸಕ್ತಿಗಳು ಪರಸ್ಪರ ಹಂಚಿಕೊಂಡ ಸಾಧನೆಗಳ ಸ್ವಾಭಾವಿಕ ಜೊತೆಗಾರಿಕೆಯನ್ನು ಹೊಂದಲು ನಮ್ಮನ್ನು ಮುನ್ನಡೆಸುತ್ತದೆ. ಹಿಂದಿನ ಘಟನೆಗಳಿಂದ ದೂರವಾಗಿ, ಭಾರತ ಮತ್ತು ಅಮೆರಿಕ ನಿರ್ಣಾಯಕ ಹೆಜ್ಜೆಯನ್ನು ಇಟ್ಟಿದೆ. ಹೊಸ ಶತಮಾನದ ಉದಯ ನಮ್ಮ ಸಂಬಂಧಗಳ ಹೊಸ ಆರಂಭಕ್ಕೆ ನಾಂದಿ ಹಾಡಿದೆ. ಈ ಭರವಸೆಯನ್ನು ಈಡೇರಿಸುವ ಮತ್ತು ಇಂದಿನ ನಂಬಿಕೆಯನ್ನು ಅತ್ಯಗೊಳಿಸಲು ಕಾರ್ಯಪ್ರವೃತ್ತರಾಗೋಣ. ನಮ್ಮ ಮತ್ತು ನಮ್ಮ ದೃಷ್ಟಿಕೋನದ ನಡುವೆ ಇರವ ವಿರೋಧಾಬಾಸದ ಛಾಯೆಯನ್ನು ದೂರಗೊಳಿಸುವ. ನಮಗೆ ಮತ್ತು ನಾವು ಜೀವಿಸುತ್ತಿರುವ ಜಗತ್ತಿಗೆ ನಾವು ಬಯಸುವ ಭವಿಷ್ಯವನ್ನು ಕಟ್ಟಲು ನಮ್ಮಲ್ಲಿರುವ ಎಲ್ಲ ಶಕ್ತಿಯನ್ನೂ ವಿನಿಯೋಗಿಸೋಣ.

5. ಪೊಖ್ರಾಣ್ ಪರಮಾಣು ಪರೀಕ್ಷೆಯ ನಂತರ ಲೋಕಸಭೆಯಲ್ಲಿ ಮಾಡಿದ ಭಾಷಣ:

ನಾವು ಮೂರು ಬಾರಿ ದಾಳಿಗೆ ಒಳಗಾಗಿದ್ದೇವೆ. ಇದು ಮತ್ತೆ ಮುಂದುವರಿಯಬಾರದು. ನಾವು ಯಾರ ಮೇಲೂ ದಾಳಿ ನಡೆಸಲು ಸನ್ನದ್ಧರಾಗುತ್ತಿಲ್ಲ. ನಮಗೆ ಆ ಉದ್ದೇಶವೂ ಇಲ್ಲ. ಪೊಖ್ರಾಣ್-2 ಮತ್ತು ಲಾಹೋರ್ ಬಸ್ ಸೇವೆ ಮಧ್ಯೆಯ ಸಂಬಂಧ ಏನೆಂದು ನನ್ನನ್ನು ಪ್ರಶ್ನಿಸಲಾಗುತ್ತಿದೆ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು. ನಮ್ಮ ಭದ್ರತೆಯ ಶಕ್ತಿ ಮತ್ತು ಸ್ನೇಹದ ಹಸ್ತ. ಪ್ರಾಮಾಣಿಕತೆಯಿಂದ ಕೂಡಿದ ಸ್ನೇಹದ ಹಸ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News