ಹಸಿವು, ಹತಾಶೆಯಿಂದ ಸುಪ್ರಿಂ ಕೋರ್ಟ್ನಲ್ಲಿ ವ್ಯಕ್ತಿಯ ಗದ್ದಲ
Update: 2018-08-21 14:26 GMT
ಹೊಸದಿಲ್ಲಿ, ಆ. 21: ಸುಪ್ರೀಂ ಕೋರ್ಟ್ ಸಂಕೀರ್ಣದ ಒಳಗಡೆ ಹಸಿವು ಹಾಗೂ ಹತಾಶೆಯಿಂದ ವ್ಯಕ್ತಿಯೋರ್ವ ಗದ್ದಲ ಸೃಷ್ಟಿಸಿದ ಘಟನೆ ಸೋಮವಾರ ನಡೆದಿದೆ. ವ್ಯಕ್ತಿಯೋರ್ವ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಸಂಕೀರ್ಣದ ಒಳಗಡೆ ಬಿದ್ದುಕೊಂಡಿದ್ದಾನೆ ಎಂದು ಸುಪ್ರೀಂ ಕೋರ್ಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಆನಂತರ ಅವರನ್ನು ಕೋಯಮತ್ತೂರಿನ ನಿವಾಸಿ ಬಾಬು ಎಂದು ಗುರುತಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ ನಂತರ ಬಾಬು ಹೈಕೋರ್ಟ್ನಲ್ಲಿ ಪ್ರಕರಣವೊಂದರಲ್ಲಿ ಸೋತಿದ್ದರು ಎಂದು ತಿಳಿದು ಬಂತು. ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು 5 ದಿನಗಳ ಹಿಂದೆ ಅವರು ದಿಲ್ಲಿಗೆ ಆಗಮಿಸಿದ್ದರು. ಆದರೆ, ಬಾಬು ಪ್ರಕರಣದ ಯಾವುದೇ ವಿವರಗಳನ್ನು ನೀಡಿಲ್ಲ. ಅಗತ್ಯವಿರುವ ಕಾಗದಪತ್ರಗಳ ಕೊರತೆಯ ಹಿನ್ನೆಲೆಯಲ್ಲಿ ಮೊಕದ್ದಮೆ ದಾಖಲಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಹತಾಶನಾಗಿದ್ದ ಹಾಗೂ ಹಸಿವಿನಿಂದ ತತ್ತರಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.