ಬ್ರಹ್ಮಾವರ: ಚೂರಿಯಿಂದ ತಿವಿದು ಮೊಬೈಲ್, ಸರ ಲೂಟಿ

Update: 2018-08-21 16:21 GMT

ಬ್ರಹ್ಮಾವರ, ಆ.21: ದ್ವಿಚಕ್ರ ಸವಾರನನ್ನು ಅಡ್ಡಗಟ್ಟಿದ್ದ ಮೂವರ ತಂಡ ಚೂರಿಯಿಂದ ತಿವಿದು ಮೊಬೈಲ್ ಹಾಗೂ ಚಿನ್ನದ ಸರ ಸುಲಿಗೆ ಮಾಡಿ ಪರಾರಿ ಯಾಗಿರುವ ಘಟನೆ ಆ.20ರಂದು ರಾತ್ರಿ 11.45ರ ಸುಮಾರಿಗೆ ಬ್ರಹ್ಮಾವರ- ಹೆಬ್ರಿ ಮುಖ್ಯ ರಸ್ತೆಯ ವೆಸ್ಟ್ ಕೋಸ್ಟ್ ಕೆಮಿಕಲ್ಸ್ ಎದುರು ನಡೆದಿದೆ.

ಚಾಂತಾರು ಗ್ರಾಮದ ಅಗ್ರಹಾರ ರಸ್ತೆಯ ಜಗದೀಶ(38) ಎಂಬವರು ಹೋಂಡಾ ಆ್ಯಕ್ಟಿವ್ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎದುರುನಿಂದ ನಡೆದು ಕೊಂಡು ಬರುತ್ತಿದ್ದ ಅಪರಿಚಿತ ವ್ಯಕ್ತಿ ಒಮ್ಮೆಲೇ ವಾಹನವನ್ನು ಅಡ್ಡಗಟ್ಟಿದ ಎನ್ನಲಾಗಿದೆ. ನಂತರ ಜಗದೀಶ್‌ರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆಯಲು ಪ್ರಯತ್ನಿಸಿದನು. ನಂತರ ಅಲ್ಲೆ ಪಕ್ಕದಲ್ಲಿದ್ದ ಮತ್ತಿಬ್ಬರು ಬಂದು ಜಗದೀಶ್‌ರನ್ನು ಹಿಡಿದರು. ಜಗದೀಶ್ ಈ ಮೂವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ದುಷ್ಕರ್ಮಿಗಳು ಜಗದೀಶ್‌ರ ಹೊಟ್ಟೆಗೆ ಚೂರಿಯಿಂದ ತಿವಿದು ಗಾಯಗೊಳಿಸಿದರು. ನಂತರ ಜಗದೀಶ್‌ರ ಕಿಸೆಯಲ್ಲಿದ್ದ ಎರಡು ಮೊಬೈಲ್ ಮತ್ತು 3 ಪವನ್ ತೂಕದ 70,000ರೂ. ಮೌಲ್ಯದ ಚಿನ್ನದ ಸರ ಹಾಗೂ ಅಂಗಡಿಯ ಕೀ ಗೊಂಚಲನ್ನು ಕಸಿದುಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾದರೆಂದು ದೂರಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News