ಬೈಕ್ ಗಳ ಮುಖಾಮುಕಿ ಢಿಕ್ಕಿ: ಯುವಕ ಮೃತ್ಯು, ಇಬ್ಬರಿಗೆ ಗಾಯ
Update: 2018-08-25 05:44 GMT
ಮಂಜೇಶ್ವರ, ಆ.25: ಬೈಕ್ಗಳೆರಡು ಮುಖಾಮುಕಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬಂದ್ಯೋಡು ಬಳಿ ಸಂಭವಿಸಿದೆ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ.
ಕುಂಬಳೆ ಶಾಂತಿಪಳ್ಳ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ರಮೀಝ್ ರಾಝ್(30) ಮೃತಪಟ್ಟವರಾಗಿದ್ದಾರೆ. ಶುಕ್ರವಾರ ಸಂಜೆ ಈ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ಬಂದ್ಯೋಡು ಬಳಿ ಮಂಗಳೂರು ಕಡೆ ತೆರಳುತ್ತಿದ್ದ ರಮೀಝ್ ರಾಝ್ ಅವರ ಬೈಕಿಗೆ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ರಮೀಝ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಇನ್ನೊಂದು ಬೈಕಿನಲ್ಲಿದ್ದ ಮುಹಮ್ಮದ್ ನೂರುದ್ದೀನ್, ಮುಹಮ್ಮದ್ ಆದಿಲ್ ಎಂಬವರು ಗಾಯಗೊಂಡಿದ್ದಾರೆ.
ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.