ಅರಣ್ಯದೊಳಗೆ ರಾತ್ರಿ ಕಳೆದ 11 ಸಂತ್ರಸ್ತರು: ಪಾರ್ಶ್ವವಾಯು ಪೀಡಿತ ತಂದೆಯನ್ನು ಎತ್ತಿಕೊಂಡೇ ಬಂದ ಮಗಳು

Update: 2018-08-27 16:30 GMT

ಮಡಿಕೇರಿ, ಆ.27: ಅತಿಯಾದ ಮಳೆ, ಬೆಟ್ಟ ಕುಸಿತ ಹಾಗೂ ಜಲ ಪ್ರವಾಹದ ಸಂದರ್ಭ ಮಕ್ಕಂದೂರು ಸಮೀಪದ ತಂತಿಪಾಲ ಗ್ರಾಮದ 11 ಮಂದಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಬೆಟ್ಟ ಹತ್ತಿ ಇಳಿದು ಬರುತ್ತಿದ್ದರು. ಎಂದಿನಂತೆ ಓಡಾಡುತ್ತಿದ್ದ ದಾರಿಯಲ್ಲಿ ಮರಗಳು ಅಡ್ಡಬಿದ್ದು, ದಾರಿ ಕಾಣದೆ ಕಾಡು ದಾರಿಯಲ್ಲಿ ಬರುತ್ತಿದ್ದ ಸಂದರ್ಭ ಕಾಡಿನಂಚಿನಲ್ಲಿ ವಾಸವಿದ್ದ ಜನರು ಸಹ ಮನೆಗಳನ್ನು ಖಾಲಿ ಮಾಡಿ ಬೇರೆಡೆಗೆ ತೆರಳಿದ್ದರು. 

ಖಾಲಿಯಾಗಿದ್ದ ಮನೆಗಳೂ ಬೀಳುವ ಹಂತದಲ್ಲಿದ್ದವು. ಪಕ್ಕದಲ್ಲೇ ಬೃಹತ್ ಮರಗಳು ನೆಲಕ್ಕುರುಳಿದ್ದವು. ಇದರ ನಡುವೆ ಜೋರಾದ ಮಳೆ ಸುರಿಯುತ್ತಿತ್ತು. ಆದರೂ ಧೈರ್ಯ ಮಾಡಿ ಮುರಿಯುವ ಹಂತದಲ್ಲಿದ್ದ ಆ ಮನೆಯೊಳಗೆ ಬೇರೆ ಬೇರೆ ಕುಟುಂಬದ ಒಟ್ಟು 11 ಮಂದಿ ಒಂದು ರಾತ್ರಿ ಕಳೆದರು. 
ಕಣ್ಣೆದುರೇ ನೆರೆ, ಪ್ರವಾಹದಿಂದ ಬೆಟ್ಟವೇ ಕುಸಿಯುತ್ತಿರುವ ಸಂದರ್ಭ ಅಲ್ಲಿನ ಯುವತಿ ಜ್ಯೋತಿ, 4 ತಿಂಗಳ ಹಿಂದೆ ತಲೆ ಪಾರ್ಶ್ವವಾಯುವಿಗೆ (ಬ್ರೈನ್‍ಸ್ಟ್ರೋಕ್) ತುತ್ತಾಗಿ ನಡೆಯಲು, ಎದ್ದು ನಿಲ್ಲಲೂ ಆಗದಂತಹ ಪರಿಸ್ಥಿತಿಯಲ್ಲಿದ್ದ ತಂದೆ ಉತ್ತಯ್ಯ ಅವರನ್ನು ಎತ್ತಿಕೊಂಡು, ತಾಯಿಯನ್ನು ಕರೆದುಕೊಂಡು ತಂತಿಪಾಲದಿಂದ 3 ಕಿ.ಮೀ ದೂರದ ಹುಚ್ಚಕಾಡು ಎಂಬಲ್ಲಿಗೆ ಬಂದರು.

ಆ ಮೂವರು ಹಾಗೂ ಜೊತೆಯಲ್ಲಿದ್ದ ಅಜ್ಜಿ ಸೇರಿದಂತೆ ಇತರ 7 ಮಂದಿ ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಕಾಡಿನಂಚಿನಲ್ಲಿದ್ದ ಮನೆಯೊಳಗೆ ಒಂದು ರಾತ್ರಿ ಇಡೀ ಕಳೆದರು. ಬೆಳಗಾದ ನಂತರ ಮತ್ತೆ ಅಂಗವಿಕಲ ತಂದೆಯನ್ನು ಎತ್ತಿಕೊಂಡು ಬೆಟ್ಟವನ್ನು ಏರಿ ಬರುವ ಸಂದರ್ಭ ಬೆಟ್ಟದ ಸಮೀಪದಲ್ಲಿದ್ದ ಮನೆಯವರು ರಸ್ತೆಗೆ ಬರುವ ತನಕ ಸ್ವಲ್ಪ ದೂರದವರೆಗೆ ಒಬ್ಬೊಬ್ಬರಂತೆ ಉತ್ತಯ್ಯ ಅವರನ್ನು ಎತ್ತಿಕೊಂಡು ನಡೆದು ಬರುವ ಮೂಲಕ ಸಹಾಯ ಮಾಡಿದರು.

ನಂತರ ಉತ್ತಯ್ಯ ಅವರನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಗುಡ್ಡೆಹೊಸೂರು ಸಮೀಪದ ಅತ್ತೂರು ಗ್ರಾಮದಲ್ಲಿರುವ ಅತ್ತೆ ಶೋಭಾ ಎಂಬವರ ಮನೆಗೆ ತಾಯಿ ಗೌರಮ್ಮ ಹಾಗೂ ತಂದೆಯನ್ನು ಜ್ಯೋತಿ ಕರೆತಂದಿದ್ದಾರೆ. ತಂದೆಗೆ ಚಿಕಿತ್ಸೆ ನೀಡುತ್ತಿದ್ದ ಔಷಧಿಗಳು, ಚಿಕಿತ್ಸೆ ಕೊಡಿಸಿದ ದಾಖಲಾತಿಗಳು, ಮನೆಯಲ್ಲಿದ್ದ ಎಲ್ಲಾ ದಾಖಲಾತಿಗಳು, ವಸ್ತುಗಳು ಎಲ್ಲವನ್ನೂ ಕಳೆದುಕೊಂಡು ಕೈಯಲ್ಲಿ ಹಣವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಜ್ಯೋತಿ ಕಣ್ಣೀರಿಡುತ್ತಿದ್ದಾರೆ.

‘ನನ್ನ ಅಕ್ಕ ಬೆಂಗಳೂರು ಮತ್ತು ತಮ್ಮ ಮಂಗಳೂರಿನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿರಾಶ್ರಿತರಾಗಿರುವ ನಮಗೆ ಕೆಲವರು ಹಣ ಸಹಾಯ ನೀಡಿದ್ದು, ನಮ್ಮ ತಂದೆಯವರಿಗೆ ವೀಲ್‍ಚೇರ್ ನೀಡಿ ಸಹಾಯ ಹಸ್ತ ನೀಡುತ್ತಿದ್ದಾರೆ. ಮನೆ, ಜಮೀನು ಕಳೆದುಕೊಂಡು, ತಂದೆಯೂ ಈ ಸ್ಥಿತಿಯಲ್ಲಿ ಇರುವ ನಾವು  ಮುಂದೆ  ಜೀವನ ನಡೆಸುವುದು ಹೇಗೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಜ್ಯೋತಿ ಅವರು ಬಿ.ಕಾಂ ಪದವೀಧರೆಯಾಗಿದ್ದು, ಇದೀಗ ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಕುಟುಂಬಕ್ಕೆ ನೆರವಾಗಲು ಇಚ್ಛಿಸುವ ದಾನಿಗಳು 9482572674 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News