ಕೇರಳದ ಯುವಕ ಕೊಲ್ಲೂರಿನಲ್ಲಿ ನದಿಪಾಲು
Update: 2018-08-28 16:54 GMT
ಕೊಲ್ಲೂರು, ಆ.28: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳದ ಕುಟುಂಬದೊಂದಿಗೆ ಬಂದಿದ್ದ ಯುವಕನೋರ್ವ ಸೌಪರ್ಣಿಕ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕೇರಳ ರಾಜ್ಯದ ಆಲಪುಯ್ಯ ಜಿಲ್ಲೆಯ ಜಗನ್(18) ಎಂದು ಗುರುತಿಸಲಾಗಿದೆ. ಇವರು ಸಂಬಂಧಿಕರೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದು, ಅಲ್ಲಿ ಸೌಪರ್ಣಿಕ ನದಿಯ ಸ್ನಾನ ಘಟ್ಟದಲ್ಲಿ ಸ್ನಾನ ಮಾಡುತ್ತಿರುವಾಗ ಜಗನ್ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರೆನ್ನಲಾಗಿದೆ.
ಸ್ಥಳೀಯರು ನದಿಯ ನೀರಿನಲ್ಲಿ ಹುಡುಕಾಡಿದಾಗ ಕೊಲ್ಲೂರು ಸೌಪರ್ಣಿಕ ನದಿಯ ಡ್ಯಾಮ್ ಬಳಿ ಜಗನ್ ಪತ್ತೆಯಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತರುವಾಗ ಮೃತಪಟ್ಟ ರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.