ಗುರುವಾಯನಕೆರೆ: ತಂಡದಿಂದ ಹಲ್ಲೆ; 5 ಮಂದಿಗೆ ಗಾಯ
ಬೆಳ್ತಂಗಡಿ, ಸೆ. 4: ಗುರುವಾಯನಕೆರೆಯಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಗಲಾಟೆ ನಡೆದಿದ್ದು, ತಲವಾರಿನಿಂದ ಹಲ್ಲೆಗೆ ಒಳಗಾದ ಐದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾಯನಕೆರೆ ಅರಮಲೆಬೆಟ್ಟದ ಬಳಿ ನಿವಾಸಿ ಆಟೋ ಚಾಲಕರಾದ ಅಬ್ದುಲ್ ರಹಿಮಾನ್ (55) ಅವರ ಮನೆಯಲ್ಲಿ ಸೋಮವಾರ ಕಾರ್ಯಕ್ರಮ ನಡೆದಿದ್ದು, ಇದಕ್ಕೆ ಅವರ ಬೆಂಗಳೂರಿನಲ್ಲಿರುವ ಇಬ್ಬರು ಪುತ್ರರಾದ ರಝಾಕ್ (26) ಮತ್ತು ರಫೀಕ್ (25) ಬಂದಿದ್ದು, ಕಾರ್ಯಕ್ರಮ ಎಲ್ಲಾ ಮುಗಿದ ಬಳಿ ಸಂಜೆ ರಝಾಕ್ ಬೈಕ್ ನಲ್ಲಿ ಗುರುವಾಯನಕೆರೆಗೆ ಹೋಗಿದ್ದರು. ವಾಪಸ್ ಬರುವಾಗ ತಲವಾರ್ ನೊಂದಿಗೆ ಅರಮಲೆಬೆಟ್ಟ ದ್ವಾರದ ಬಳಿ ಕಾದು ಕುಳಿತ್ತಿದ್ದ ಸಫ್ವಾನ್ (24), ಶರೂಕ್ (23), ಇರ್ಷಾದ್ (20) ಮತ್ತಿತರರ ತಂಡ ರಝಾಕ್ ರಿಗೆ ಹಲ್ಲೆ ಮಾಡಿದ್ದು ಅಲ್ಲದೆ ಸಫ್ವಾನ್ ತಂಡ ಕೈಯಲ್ಲಿದ್ದ ತಲವಾರಿನಿಂದ ರಝಾಕ್ ರ ತಂದೆ ಹಾಗೂ ಇಬ್ಬರು ಸಹೋದರರಿಗೆ ಹಾಗೂ ಗಲಾಟೆ ಬಿಡಿಸಲು ಬಂದ ಆಟೋ ಚಾಲಕ ಹಂಝ (27) ಎಂಬವರಿಗೂ ಗಂಭೀರ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.
ಗಂಭೀರ ಗಾಯಗೊಂಡ ರಹಿಮಾನ್ ಮತ್ತು ಅವರ ಮಕ್ಕಳಾದ ರಝಾಕ್, ರಫೀಕ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆ ಬಿಡಿಸಲು ಬಂದ ಆಟೋ ಚಾಲಕ ಹಂಝ ಗುರುವಾಯನಕೆರೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತಲವಾರು ದಾಳಿ ನಡೆಸಿದ ಸಫ್ವಾನ್ ತಂಡ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.